ಸಚಿನ್ ಪೈಲಟ್
ನವದೆಹಲಿ: ‘ಪಕ್ಷದೊಳಗೆ ಯುವಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತಿದ್ದು, ಅವರು ಆ ಜವಾಬ್ದಾರಿಗಳನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ. ರಾತ್ರಿ ಬೆಳಗಾಗುವುದರ ಒಳಗೆ ಬದಲಾವಣೆಗಳು ಸಾಧ್ಯವಿಲ್ಲ. ಆದರೆ, ಪಕ್ಷದಲ್ಲಿ ನಿಧಾನವಾಗಿ ಯುವಕರು ಮುನ್ನಲೆಗೆ ಬರುತ್ತಿದ್ದಾರೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ತಿಳಿಸಿದರು.
ಏಪ್ರಿಲ್ 9ರಂದು ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಹಿನ್ನೆಲೆಯಲ್ಲಿ ‘ಪಿಟಿಐ’ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.
‘ಪಕ್ಷದೊಳಗಿನ ಎಲ್ಲ ನೇಮಕಾತಿಗಳೂ ಉದಯಪುರದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಅನುಗುಣವಾಗಿಯೇ ನಡೆಯುತ್ತಿವೆ. ಸಂಸತ್ತಿನಲ್ಲಿ, ಸಂಸತ್ತಿನ ಹೊರಗೆ, ರಾಜ್ಯ ಘಟಕಗಳಲ್ಲಿ ಅಥವಾ ಎಐಸಿಸಿಗೆ ನೇಮಕ ಮಾಡುವಾಗ ಹೊಸ ಮುಖಗಳಿಗೆ, ಯುವಕರಿಗೆ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ’ ಎಂದರು.
‘2025ರಲ್ಲಿ ಪಕ್ಷದ ಸಾಂಸ್ಥಿಕ ಸ್ವರೂಪವನ್ನು ಮತ್ತಷ್ಟು ಬಲಗೊಳಿಸುವುದರ ಕಡೆಗೆ ಗಮನ ಹರಿಸುತ್ತೇವೆ ಎಂದು 2024ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೇ ನಾವು ಘೋಷಿಸಿದ್ದೇವೆ. ಇದಕ್ಕೆ ಪಕ್ಷ ಬದ್ಧವಾಗಿದ್ದು, ಅದೇ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದರು.
2025ರಲ್ಲಿ ನಾವು ಪಕ್ಷವನ್ನು ಮತ್ತೊಮ್ಮೆ ಕಟ್ಟಿ ನಿಲ್ಲಿಸುತ್ತೇವೆ. ಪಕ್ಷದ ಸಿದ್ಧಾಂತವನ್ನು ಬಲಗೊಳಿಸುತ್ತೇವೆ. ಮುತುವರ್ಜಿಯಿಂದ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿ ನೀಡುತ್ತೇವೆ. ನಿರೀಕ್ಷೆಗೆ ತಕ್ಕಂತೆ ಯಾರು ಕೆಲಸ ಮಾಡುವುದಿಲ್ಲವೊ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಮತ್ತು ಅವರನ್ನು ಕೆಳಗಿಳಿಸಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಲಾಗುತ್ತದೆ
ಇತ್ತೀಚೆಗೆ ಇಂದಿರಾ ಭವನದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರ ಸಭೆ ನಡೆಸಲಾಯಿತು. ಚುನಾವಣೆ ಹಣಕಾಸಿನ ನಿರ್ವಹಣೆ ಮತ್ತು ಅಭ್ಯರ್ಥಿಗಳ ಆಯ್ಕೆ ವಿಚಾರಗಳಲ್ಲಿ ಜಿಲ್ಲಾ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ನಿರ್ಧರಿಸಲಾಯಿತು
ರಾಜಕಾರಣದಲ್ಲಿ ಸಿದ್ಧಾಂತ ಬಹಳ ಮುಖ್ಯವಾಗುತ್ತದೆ. ಸಿದ್ಧಾಂತ ಗಟ್ಟಿ ಇರಬೇಕು. ರಾಜಕಾರಣ ಎಂದ ಮೇಲೆ ಒಳ್ಳೆಯ ದಿನಗಳು ಕೆಟ್ಟ ದಿನಗಳು ಇದ್ದೇ ಇರುತ್ತವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.