ADVERTISEMENT

ಸಿಎಂ ಅಂಕಲ್ ನನ್ನನ್ನೂ ಅಸ್ಸಾಂಗೆ ಕರೆದುಕೊಂಡು ಹೋಗಿ! ಏಕನಾಥ ಶಿಂದೆಗೆ ಬಾಲಕಿ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2022, 7:54 IST
Last Updated 19 ಜುಲೈ 2022, 7:54 IST
   

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರ ಉರುಳಿಸಿ ನೂತನ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂದೆ ಅವರು ಕಳೆದ ಒಂದೂವರೆ ತಿಂಗಳಿನಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಿದ್ದಾರೆ.

ಇದಕ್ಕಾಗಿ ಅವರು ತಮ್ಮ ಬೆಂಬಲಿಗ 42 ಶಾಸಕರನ್ನು ಕರೆದುಕೊಂಡು ಅಸ್ಸಾಂನ ಗುವಾಹಟಿಗೆ ತೆರಳಿ ಅಲ್ಲಿನ ಐಷಾರಾಮಿ ಬ್ಲೂ ರಾಡಿಸನ್ ಹೋಟೆಲ್‌ನಲ್ಲಿ ಸುಮಾರು ಎರಡು ವಾರ ತಂಗಿದ್ದರು. ಇದೇ ಸಮಯದಲ್ಲಿ ಅಸ್ಸಾಂನಲ್ಲಿ ಮಹಾಪ್ರವಾಹ ಸೃಷ್ಟಿಯಾಗಿ 150 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದೀಗ ಬಾಲಕಿಯೊಬ್ಬಳು ಸಿಎಂ ಏಕನಾಥ ಶಿಂದೆ ಅವರಿಗೆ ‘ಅಂಕಲ್.. ಅಂಕಲ್ ನನ್ನೂ ಅಸ್ಸಾಂಗೆ ಕರೆದುಕೊಂಡು ಹೋಗಿ’ ಎನ್ನುವ ವಿಡಿಯೊ ವೈರಲ್ ಆಗಿದೆ.

ADVERTISEMENT

ಮಂಗಳವಾರ ಬೆಳಿಗ್ಗೆ ಮುಂಬೈನ ನಂದನವನ ಭವನದಲ್ಲಿ ಸಭೆ ನಡೆಸಿ ಹೊರ ಬರುತ್ತಿದ್ದಾಗ ಅಲ್ಲಿಗೆ ಬಂದ ಅನ್ನದಾ ಧಾಮ್ರೆ ಎನ್ನುವ ಬಾಲಕಿಯೊಬ್ಬಳು ‘ನನ್ನನ್ನೂ ದೀಪಾವಳಿ ರಜೆಗೆ ಅಸ್ಸಾಂಗೆ ಕರೆದುಕೊಂಡು ಹೋಗಿ ಸಿಎಂ ಅಂಕಲ್, ನಾನು ನಿಮ್ಮ ಹಾಗೇ ಸಿಎಂ ಆಗಿ, ಮುಂದೆ ಪ್ರವಾಹದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡಬೇಕು’ಎಂದಿದ್ದಾಳೆ. ಬಾಲಕಿಯ ಈ ಮಾತನ್ನು ಕೇಳಿ ಸಿಎಂ ಸೇರಿದಂತೆ ಅಲ್ಲಿದ್ದವರು ಮುಗಳ್ನಕ್ಕು ಬಾಲಕಿಗೆ ಶುಭ ಕೋರಿ ಹೊರಟರು.

ಅಸ್ಸಾಂನಲ್ಲಿ ಇದ್ದ ವೇಳೆ ಏಕನಾಥ ಶಿಂದೆ ಹಾಗೂ ಇತರ ಶಾಸಕರು ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ ನೀಡಿದ್ದರು. ನಾವು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲಿದ್ದೇವೆ ಎಂದು ಶಿಂದೆ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.