ADVERTISEMENT

ಅಪರಾಧ ಪ್ರಕರಣಗಳಿರುವ ಅಭ್ಯರ್ಥಿ ಆಯ್ಕೆ ಮಾಡಿದ್ದಕ್ಕೆ ಕಾರಣ ನೀಡಿ: ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 6:36 IST
Last Updated 13 ಫೆಬ್ರುವರಿ 2020, 6:36 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಅಪರಾಧ ಪ್ರಕರಣಗಳಿರುವ ಅಭ್ಯರ್ಥಿಗಳನ್ನುಯಾಕೆ ಆಯ್ಕೆ ಮಾಡಿದ್ದೀರಿ ಎಂಬುದಕ್ಕೆ ಕಾರಣ ನೀಡಿ ಎಂದು ಸುಪ್ರೀಂಕೋರ್ಟ್ ರಾಜಕೀಯ ಪಕ್ಷಗಳಿಗೆ ಹೇಳಿದೆ. ಅಂದರೆತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ವ್ಯಕ್ತಿ ಚುನಾವಣೆಯಲ್ಲಿಗೆಲುವು ಸಾಧಿಸಲು ಇರುವ ಅಂಶದ ಹೊರತಾಗಿ ಸಮಾಜದಲ್ಲಿ ಅವರು ಏನು ಸಾಧಿಸಿದ್ದಾರೆ ಎಂಬುದರ ಬಗ್ಗೆ ರಾಜಕೀಯ ಪಕ್ಷಗಳು ವಿವರಣೆ ನೀಡಬೇಕಾಗಿದೆ.

ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಪರಾಧ ದಾಖಲೆಗಳನ್ನು 48 ಗಂಟೆಯೊಳಗೆ ಪಕ್ಷದ ವೆಬ್‌ಸೈಟ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಬಿಜೆಪಿ ನಾಯಕ ಮತ್ತು ನ್ಯಾಯಮೂರ್ತಿ ಅಶ್ವಿನ್ ಕೆ ಉಪಾಧ್ಯಾಯ್ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರು ಸಂವಿಧಾನದ 142ನೇ ವಿಧಿಯಡಿಯಲ್ಲಿ ಈ ಆದೇಶ ನೀಡಿದ್ದಾರೆ.

ADVERTISEMENT

ರಾಜಕೀಯದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಉಲ್ಲೇಖಿಸಿದ ಸುಪ್ರೀಂಕೋರ್ಟ್, ಅಭ್ಯರ್ಥಿ ಯಾವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.ಪ್ರಕರಣಗಳ ವಿವರ ಮತ್ತು ವಿಚಾರಣೆ ಎಲ್ಲಿಯವರೆಗೆ ನಡೆದಿದೆ ಎಂಬುದನ್ನೂ ರಾಜಕೀಯ ಪಕ್ಷಗಳು ಹೇಳಬೇಕು ಎಂದಿದೆ.

ಅಪರಾಧ ಪ್ರಕರಣಗಳಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರ ಬಗ್ಗೆರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ 74 ಗಂಟೆಗಳೊಳಗೆ ವರದಿ ಸಲ್ಲಿಸಬೇಕು. ಒಂದು ವೇಳೆ ರಾಜಕೀಯ ಪಕ್ಷಗಳು ಈ ನಿರ್ದೇಶನವನ್ನು ಪಾಲಿಸದೇ ಇದ್ದರೆ ಈ ಬಗ್ಗೆ ನಿಂದನಾ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.