ADVERTISEMENT

ಟಿವಿ ಚಾನೆಲ್‌ಗೆ ಹೋಗಿ, ರಾಜಕೀಯಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಬೇಡಿ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 9:53 IST
Last Updated 27 ಜನವರಿ 2020, 9:53 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ರಾಜಕೀಯ ಲಾಭಗಳಿಕೆಗೋಸ್ಕರ ನ್ಯಾಯಾಲಯದ ಸಮಯವನ್ನು ಬಳಸಿಕೊಳ್ಳಬೇಡಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌. ಎ. ಬೊಬ್ಡೆ ಅವರು ಬಿಜೆಪಿ ಮತ್ತು ಪಶ್ಚಿಮ ಬಂಗಾಳದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ರಾಜಕೀಯ ಹತ್ಯೆಗಳ ವಿರುದ್ಧ ಬಿಜೆಪಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಸೋಮವಾರ ಈ ಅರ್ಜಿಯ ವಿಚಾರಣೆ ಕೈಗೊಂಡ ಕೋರ್ಟ್, ಎರಡೂ ಕಡೆಗಳ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

ಹಿರಿಯ ವಕೀಲ ಗೌರವ್ ಭಾಟಿಯ ಬಿಜೆಪಿ ಪರ ವಾದ ಮಂಡಿಸಿದರೆ, ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ADVERTISEMENT

ಬಿಜೆಪಿ ವಕ್ತಾರ ಗೌರವ್ ಬನ್ಸಾಲ್ ಅವರು ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಹತ್ಯೆಗಳನ್ನು ಖಂಡಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಪರ ಕಪಿಲ್ ಸಿಬಲ್ ಅರ್ಜಿಯನ್ನು ವಿರೋಧಿಸಿ, ರಾಜಕೀಯ ಪಕ್ಷವೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಬಹುದೇ ಎನ್ನುವ ಕುರಿತು ನ್ಯಾಯಾಲಯವು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮಾತನಾಡಿ, ಎರಡೂ ಕಡೆಯವರೂ ರಾಜಕೀಯ ವಿಚಾರವನ್ನು ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಲಯವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ನಮಗೆ ಅರಿವಿದೆ. ನೀವಿಬ್ಬರು ಟಿವಿ ಚಾನೆಲ್‌ಗೆ ಹೋಗುವುದು ಉತ್ತಮ ಎನಿಸುತ್ತದೆ ಮತ್ತು ಅಲ್ಲಿ ರಾಜಕೀಯ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಅವರ ಕುಟುಂಬದವರು ಸಿಬಿಐ ತನಿಖೆಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಗೆ ವಿಸ್ತೃತವಾಗಿ ಉತ್ತರಿಸುವಂತೆ ಹೇಳಿರುವ ನ್ಯಾಯಾಲಯ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.