ADVERTISEMENT

ಪರ್ರೀಕರ್‌ ರಾಜೀನಾಮೆಗೆ ನಾಗರಿಕರ ಒತ್ತಾಯ

ರಾಜ್ಯಪಾಲೆ ವಿರುದ್ಧವೂ ಆಕ್ರೋಶ

ಪಿಟಿಐ
Published 23 ನವೆಂಬರ್ 2018, 14:40 IST
Last Updated 23 ನವೆಂಬರ್ 2018, 14:40 IST
ಮನೋಹರ್‌ ಪರ್ರೀಕರ್‌
ಮನೋಹರ್‌ ಪರ್ರೀಕರ್‌   

ಪಣಜಿ: ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಮಂದಿ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದ ರಾಜ್ಯಪಾಲೆ ಮೃದುಲಾ ಸಿನ್ಹಾ ವಿರುದ್ಧವೂ ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ನಾಗರಿಕರು ನಡೆಸಿದ ಹೋರಾಟಕ್ಕೆ ಪ್ರತಿಪಕ್ಷಗಳಾದ ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ.

‘ಕಳೆದ 9 ತಿಂಗಳಿನಿಂದ ಪರ್ರೀಕ್ಕರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವುದು ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ. ಹೀಗಿದ್ದರೂ, ಅವರು ಸುಮ್ಮನೆ ನೋಡುತ್ತಾ ಕೂತಿದ್ದಾರೆ, ಸಚಿವರು ತಮಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಹೋರಾಟಗಾರ ಐರೆಸ್‌ ರೋಡ್ರಿಗಸ್‌ ಆರೋಪಿಸಿದ್ದಾರೆ.

ADVERTISEMENT

‘ಮುಂದಿನ ದಿನಗಳಲ್ಲಿ ಪರ್ರೀಕರ್‌ ವಿರುದ್ಧ ಮಾತ್ರ ಪ್ರತಿಭಟನೆ ಸೀಮಿತವಾಗಿರಲ್ಲ, ರಾಜ್ಯಪಾಲರ ವಿರುದ್ಧವೂ ಧರಣಿ ನಡೆಸಲಾಗುತ್ತದೆ. ಗೋವಾದಲ್ಲಿ ಸರ್ಕಾರ ಮರುಸ್ಥಾಪನೆಯಾಗಲು ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಈ ಹೋರಾಟಕ್ಕೆ ಕೆಲವು ಸಚಿವರು ಹಾಗೂ ಬಿಜೆಪಿಯ ಶಾಸಕರು ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ’ ಎಂದರು.

ಶನಿವಾರ ರಾತ್ರಿ ಅಜಾದ್‌ ಮೈದಾನದಲ್ಲಿ ಹೃದ್ರೋಗತಜ್ಞ ಡಾ. ಫ್ರಾನ್ಸಿಸ್‌ ಕೊಲಾಸೊ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಇದಲ್ಲದೇ,ಮಾಹಿತಿ ಹಕ್ಕು ಕಾರ್ಯಕರ್ತ ರಂಜನ್‌ ಘಾಟೆ ಎಂಬುವರು ಕಳೆದ ಎಂಟು ದಿನಗಳಿಂದ ಪರ್ರೀಕರ್‌ ರಾಜೀನಾಮೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.