ADVERTISEMENT

ಶಿವಾಜಿ ಹಳೇ ಕಾಲದ ಐಕಾನ್‌: ಕೋಶಿಯಾರಿ ಹೇಳಿಕೆಗೆ ಗೋವಾ ಕಾಂಗ್ರೆಸ್‌ ಕಿಡಿ

ಪಿಟಿಐ
Published 20 ನವೆಂಬರ್ 2022, 5:15 IST
Last Updated 20 ನವೆಂಬರ್ 2022, 5:15 IST
ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ
ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ   

ಪಣಜಿ: ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಹೇಳಿಕೆಗೆ ಸಂಬಂಧಿಸಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋಶಿಯಾರಿ ಅವರು ಭಾಷಣದ ವೇಳೆ 'ಶಿವಾಜಿ ಹಳೇ ಕಾಲದ ಐಕಾನ್‌' ಎಂದು ಮಾತನಾಡಿದ್ದಕ್ಕೆ ಮತ್ತು ಅವರನ್ನು ವಿ.ಡಿ. ಸಾವರ್ಕರ್, ನಿತಿನ್‌ ಗಡ್ಕರಿ ಅವರ ಜೊತೆ ಹೋಲಿಕೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಔರಂಗಬಾದ್‌ನಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಐಕಾನ್‌ಗಳ ಬಗ್ಗೆ ಕೋಶಿಯಾರಿ ಮಾತನಾಡಿದರು. 'ಯಾರು ನಿಮ್ಮ ಐಕಾನ್‌, ಯಾರು ನಿಮ್ಮ ಮೆಚ್ಚಿನ ನಾಯಕ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ ಹೊರಗೆ ಹುಡುಕಬೇಕಾದ ಅವಶ್ಯಕತೆ ಇಲ್ಲ. ಇಲ್ಲೇ ಮಹಾರಾಷ್ಟ್ರದಲ್ಲೇ ನಿಮಗೆ ಸಿಗುತ್ತಾರೆ. ಶಿವಾಜಿ ಹಳೇ ಕಾಲದ ಮಾತಾಯಿತು. ಈಗಿನ ಮಾತನ್ನು ಹೇಳುತ್ತಿದ್ದೇನೆ. ಬಿ.ಆರ್‌.ಅಂಬೇಡ್ಕರ್‌ ಅವರಿಂದ ನಿತಿನ್‌ ಗಡ್ಕರಿ ಅವರ ವರೆಗೆ ಐಕಾನ್‌ಗಳು ಸಿಗುತ್ತಾರೆ' ಎಂದಿದ್ದಾರೆ.

ADVERTISEMENT

ಕೋಶಿಯಾರಿ ಅವರ ಭಾಷಣದ ತುಣುಕನ್ನು ಹಂಚಿಕೊಂಡಿರುವ ಗೋವಾ ಕಾಂಗ್ರೆಸ್‌ನ ವಕ್ತಾರ ಅಮರನಾಥ್‌ ಪಣಜಿಕರ್‌ , ಮಹಾರಾಷ್ಟ್ರ ರಾಜ್ಯಪಾಲರ ಮಾತನ್ನು ಖಂಡಿಸುವುದಾಗಿ ತಿಳಿಸಿದರು.

'ನಾವು (ಗೋವಾ ಕಾಂಗ್ರೆಸ್‌) ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಮತ್ತು ಬಿಜೆಪಿ ವಕ್ತಾರ ಸುಧಾಂಶು ತಿವಾರಿ ಅವರು ಶಿವಾಜಿ ಮಹಾರಾಜರನ್ನು ಅವಮಾನಿಸಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಛತ್ರಪತಿ ಶಿವಾಜಿ ಕೆಚ್ಚೆದೆಯ ಶ್ರೇಷ್ಠ ಯೋಧ. ಅವರನ್ನು ಹೇಡಿ ಸಾವರ್ಕರ್‌ ಮತ್ತು ನಿತಿನ್‌ ಗಡ್ಕರಿ ಅವರ ಜೊತೆಗೆ ಹೋಲಿಸುವುದು ಮೂರ್ಖತನ' ಎಂದು ಪಣಜಿಕರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.