ಪಣಜಿ: ಭಾರಿ ಮಳೆಯಿಂದಾಗಿ ಗುರುವಾರ ಮುಂಜಾನೆ ಗೋವಾದ ಪೆರ್ನಮ್ನಲ್ಲಿರುವ ಕೊಂಕಣ ರೈಲ್ವೆಯ ಸುರಂಗ ಮಾರ್ಗದ ಗೋಡೆಯ ಒಂದು ಭಾಗ ಕುಸಿದಿದೆ. ಹೀಗಾಗಿ, ಈ ಮಾರ್ಗದಲ್ಲಿ ಕರ್ನಾಟಕದ ವಿವಿಧ ನಗರಗಳಿಗೆ ಸಂಚರಿಸಬೇಕಿದ್ದ ರೈಲುಗಳನ್ನು ಮಾರ್ಗ ಬದಲಿಸಿ ಲೋಂಡಾ ಮೂಲಕ ಕಳುಹಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸುಮಾರು ಐದು ಮೀಟರ್ನಷ್ಟು ಎತ್ತರದ ಗೋಡೆ ಕುಸಿದಿದೆ.ಯಾವುದೇ ಅಪಾಯಗಳು ಸಂಭವಿಸಿಲ್ಲ. ಗೋಡೆ ಕುಸಿದು ರೈಲ್ವೆ ಹಳಿಗಳ ಮೇಲೆ ಸುರಿದಿರುವ ಮಣ್ಣನ್ನು ತೆರವುಗೊಳಿಸವು ಕಾರ್ಯ ನಡೆಯುತ್ತಿದೆ ಎಂದು ಕೊಂಕಣ ರೈಲ್ವೆ ಮಂಡಳಿಯ ಅಧಿಕಾರಿ ಬಾಬನ್ ಘಾಟ್ಗೆ ತಿಳಿಸಿದ್ದಾರೆ. ಮುಂದಿನ ಸೂಚನೆ ನೀಡುವವರೆಗೂ, ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಎರ್ನಾಕುಲಂ- ನಿಜಾಮುದ್ದೀನ್ ಸೂಪರ್ಫಾಸ್ಟ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು, ತಿರುವನಂತಪುರ ಸೆಂಟ್ರಲ್ ಲೋಕಮಾನ್ಯ ತಿಲಕ್ ಸ್ಪೆಷಲ್ ಎಕ್ಸ್ಪ್ರೆಸ್, ತಿರುವನಂತಪುರ ಸೆಂಟ್ರಲ್ ರಾಜಧಾನಿ ಸ್ಪೆಷಲ್ ಎಕ್ಸ್ಪ್ರೆಸ್, ನಿಜಾಮುದ್ದೀನ್ ಸ್ಪೆಷಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಲೋಕಮಾನ್ಯತಿಲಕ್ ತಿರುವನಂತಪುರ ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಯಿತು. ಕಳೆದ ಐದು ದಿನಗಳಿಂದ ಗೋವಾದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೆಲವು ತಗ್ಗು ಪ್ರದೇಶಗಳು ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.