ಲಖನೌ: ದೇವರಿಗೆ ಸಾವಿದೆಯೇ? ಆಸ್ತಿಕರು ಈ ಮಾತನ್ನು ಸುತಾರಾಂ ಒಪ್ಪುವುದಿಲ್ಲ. ಲಖನೌ ಜಿಲ್ಲೆಯ ಮೋಹನಲಾಲ್ ಗಂಜ್ ಪಟ್ಟಣದ ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ದೇವರಿಗೂ ಸಾವಿದೆ!
ಅಷ್ಟೇ ಅಲ್ಲ, ‘ದಿವಂಗತ‘ರಾಗುವ ಮೊದಲು ದೇವಸ್ಥಾನದ ಅಂದರೆ ತನ್ನ ಹೆಸರಿನಲ್ಲಿದ್ದ ಭೂಮಿಯನ್ನು ತನ್ನ ‘ವಾರಸುದಾರ’ರಿಗೂ ಬರೆದಿದ್ದಾರೆ!
ಇಂಥದೊಂದು ಬೆಳವಣಿಗೆ ನಡೆದಿರುವುದು ಜಿಲ್ಲೆಯ ಕುಸ್ಮೌರಾ ಹಾಲುಪುರ್ ಗ್ರಾಮದಲ್ಲಿ. ದೇವಸ್ಥಾನದ ಹೆಸರಿನಲ್ಲಿದ್ದ ಭೂಮಿಯನ್ನು ಕಬಳಿಸಲು ಕಿಡಿಗೇಡಿಗಳು ದಾಖಲೆಗಳಲ್ಲಿ ದೇವರನ್ನೇ ದಿವಂಗತರಾಗಿಸಿದ್ದಾರೆ.
ವರದಿಗಳ ಪ್ರಕಾರ, ನೂರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನಕ್ಕೆ ಸೇರಿರುವ ಭೂಮಿಯು ‘ಕೃಷ್ಣ–ರಾಮ್’ (ದೇವರಾದ ಕೃಷ್ಣ, ರಾಮ) ಹೆಸರಿನಲ್ಲಿತ್ತು. ಹೆಸರನ್ನು ಸ್ವಲ್ಪ ತಿದ್ದುಪಡಿ ಮಾಡಿ ಕೃಷ್ಣರಾಮ್ ‘ಮೃತರಾಗಿದ್ದಾರೆ‘ ಎಂದು ಕೆಲ ದಶಕಗಳ ಹಿಂದೆ ವಾರಸುದಾರ ಎಂದು ಗಯಾಪ್ರಸಾದ್ ಎಂಬವರ ಹೆಸರಿಗೆಭೂಮಿ ‘ವರ್ಗಾಯಿಸಲಾಗಿದೆ.
ಕೆಲ ವರ್ಷಗಳ ನಂತರ ಗಯಾ ಪ್ರಸಾದ್ ಅವರೂ ‘ಮೃತಪಟ್ಟಿದ್ದಾರೆ’ ಎಂದು ತೋರಿಸಿ, ಭೂಮಿಯನ್ನು ಅವರ ಇಬ್ಬರು ಸಹೋದರರ ಹೆಸರಿಗೆ ವರ್ಗಾಯಿಸಲಾಗಿದೆ.
ದೇವಸ್ಥಾನದ ಧರ್ಮದರ್ಶಿಗಳ ದೂರು ಆಧರಿಸಿ ತನಿಖೆ ಆರಂಭಿಸಿದಾಗ ಈ ‘ಸಾವಿನ ಸತ್ಯ’ ಬಹಿರಂಗವಾಗಿದೆ. ಕೃಷ್ಣ ಮತ್ತು ರಾಮ ದೇವರ ಹೆಸರನ್ನು ಕೃಷ್ಣರಾಮ್ ಎಂದು ಒಗ್ಗೂಡಿಸಿ, ಒಬ್ಬ ವ್ಯಕ್ತಿ ಎಂದು ಬಿಂಬಿಸಲಾಗಿದ್ದು, ಅದನ್ನೇ ದಾಖಲೆಗಳಲ್ಲಿಯೂ ತೋರಿಸಲಾಗಿದೆ ಎಂದೂ ತನಿಖೆಯಿಂದ ತಿಳಿದುಬಂದಿದೆ.
ದೇವಸ್ಥಾನದ ಭೂಮಿಯನ್ನು ಕಬಳಿಸುವುದೇ ಇದರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.