ಶ್ರೀನಗರ: ದೇಶದಾದ್ಯಂತ ಕೊರೊನಾ ಲಾಕ್ಡೌನ್ ನಡುವೆಯೇ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿನ ಅವಕಾಶಗಳಿಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದಿದೆ.ಈ ಸಂಬಂಧ ಮಂಗಳವಾರ ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಮರುವಿಂಗಡನೆ –2020 ಆದೇಶ ಹೊರಡಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 15 ವರ್ಷ ವಾಸವಿರುವ ವ್ಯಕ್ತಿಯನ್ನು ಕೇಂದ್ರಾಡಳಿತ ಪ್ರದೇಶದ ನಿವಾಸಿ ಎಂದು ಪರಿಗಣಿಸಲಾಗುವುದು. ಇಲ್ಲವೇ ಕೇಂದ್ರಾಡಳಿತ ಪ್ರದೇಶದಲ್ಲಿ ಕನಿಷ್ಠ ಏಳು ವರ್ಷ ವಿದ್ಯಾಭ್ಯಾಸ ಪೂರೈಸಿ 10 ಮತ್ತು 12ನೇ ತರಗತಿಯ ಪರೀಕ್ಷೆಗೆ ಹಾಜರಾದವರನ್ನು ಕೂಡ ಇಲ್ಲಿನ ನಿವಾಸಿಗಳೆಂದು ಪರಿಗಣಿಸಲಾಗುವುದು ಎಂಬ ಷರತ್ತುಗಳನ್ನು ರೂಪಿಸಲಾಗಿದೆ.
ಹೊಸ ಕಾಯ್ದೆಯ ಅನ್ವಯ ಕೆಳ ದರ್ಜೆಯ (ನಾನ್ ಗೆಜೆಟೆಡ್) ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದವರ ಮಕ್ಕಳು ಹಾಗೂ ಹೊರ ರಾಜ್ಯಗಳಿಂದ ಬಂದು 15 ವರ್ಷ ನೆಲೆನಿಂತವರ ಮಕ್ಕಳು ಅರ್ಹರಾಗಲಿದ್ದಾರೆ.
1984ರ ಶಾಸಕರ ಪಿಂಚಣಿ ಕಾಯ್ದೆಯ ಸೆಕ್ಷನ್ 3ಸಿ ಅಡಿ ಮಾಜಿ ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದ ವಿಶೇಷ ಭತ್ಯೆ ಹಾಗೂ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.