ADVERTISEMENT

‘ಬಿಹಾರ: ಸರ್ಕಾರಿ ಅಧಿಕಾರಿಯನ್ನು ಕೊಂದು, ಶವ ಹೂತರು’

ಪಿಟಿಐ
Published 25 ಜನವರಿ 2021, 10:45 IST
Last Updated 25 ಜನವರಿ 2021, 10:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರದ ಪಟ್ನಾ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಹತ್ಯೆಗೈದು, ಶವ ಹೂತಿರುವ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಕುರಿತು ವಿರೋಧ ಪಕ್ಷಗಳು ನಿತೀಶ್‌ ಕುಮಾರ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಮಸೌರಿ ಜಿಲ್ಲೆಯ ಬ್ಲಾಕ್‌ ಕೃಷಿ ಅಧಿಕಾರಿ ಅಜಯ್‌ ಕುಮಾರ್‌ ಅವರು ಜನವರಿ 18ರಂದು ನಾಪತ್ತೆಯಾಗಿದ್ದರು. ಪಾಟ್ನಾದ ಕಂಕಾರ್‌ಬಾಗ್‌ನಲ್ಲಿರುವ ಅವರ ನಿವಾಸದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪುನ್‌ಪುನ ನದಿ ಬಳಿ ಭಾನುವಾರ ಅಜಯ್‌ ಶವ ಪತ್ತೆಯಾಗಿದೆ.

ಅಜಯ್‌ ನಾಪತ್ತೆ ಕುರಿತಂತೆ ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ರಸಗೊಬ್ಬರ ಮತ್ತು ಬೀಜಗಳ ವ್ಯಾಪಾರಿ ಗೋಲು ಎಂಬಾತನ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು.

ADVERTISEMENT

‘ಪ್ರಕರಣ ಸಂಬಂಧ ಆರೋಪಿ ಅಭಿನವ್‌ ಆಲಿಯಾಸ್‌ ಗೋಲುನನ್ನು ಶನಿವಾರ ಬಂಧಿಸಿದ್ದು, ವಿಚಾರಣೆಯಲ್ಲಿ ಈತ ತಪ್ಪೊಪ್ಪಿಕೊಂಡಿದ್ದು, ನದಿಯ ಬಳಿ ಅಜಯ್‌ ಶವ ಹೂತಿರುವುದಾಗಿ ಮಾಹಿತಿ ನೀಡಿದ್ದಾನೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಬಿಲ್‌ ಇತ್ಯರ್ಥಪಡಿಸುವ ಕುರಿತು ವಿವಾದ ಕಾರಣ ಎನ್ನಲಾಗಿದೆ.

ಕೃತ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು, ‘ಅಧಿಕಾರಿಯನ್ನು ಅಪಹರಿಸಲಾಗಿತ್ತು. ಆಗ ಪೊಲೀಸರು ಮಲಗಿದ್ದರು. ಈಗ ಶವ ಪತ್ತೆಯಾಗಿದೆ. ಅಪರಾಧಿಗಳು ಭಯವಿಲ್ಲದೆ ಓಡಾಡುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಅಸಹಾಯಕರಾಗಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.