ನವದೆಹಲಿ: ‘ಕೇಂದ್ರ ನಾಗರಿಕ ಸೇವೆಯ (ಐಎಎಸ್, ಐಪಿಎಸ್) ಮಾದರಿಯಲ್ಲಿಯೇ ವ್ಯವಸ್ಥಿತವಾಗಿ ರೂಪಿಸಿದ ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್) ಕೂಡಾ ಅಗತ್ಯ. ಇದು, ಒಟ್ಟಾರೆಯಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಪ್ರತಿಪಾದಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿರುವ ಅವರು, ಈ ವ್ಯವಸ್ಥೆಯ ಮೂಲಕ ಅರ್ಹ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳು ನ್ಯಾಯಾಂಗ ಸೇವೆಗೆ ಸೇರ್ಪಡೆಗೊಳ್ಳುವುದು ಸಾಧ್ಯ. ಈ ವ್ಯವಸ್ಥೆಯು ಸಮಾಜದ ನಿರ್ಲಕ್ಷ್ಯಿತ ಮತ್ತು ಕೆಳಹಂತದ ವರ್ಗದವರಿಗೂ ನ್ಯಾಯ ಒದಗಿಸಲಿದೆ ಎಂದು ಹೇಳಿದ್ದಾರೆ.
ಎಐಜೆಎಸ್ ವ್ಯವಸ್ಥೆ ರೂಪಿಸಲು ಸಮಗ್ರ ಪ್ರಸ್ತಾಪವನ್ನು ರೂಪಿಸಿದ್ದು, ಕಾರ್ಯದರ್ಶಿಗಳ ಸಮಿತಿಯೂ ನವೆಂಬರ್ 2012ರಲ್ಲಿ ಇದನ್ನು ಅನುಮೋದಿಸಿದೆ. 2013ರ ಏಪ್ರಿಲ್ನಲ್ಲಿ ನಡೆದಿದ್ದ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿಯೂ ಇದು ಚರ್ಚೆಯಾಗಿತ್ತು ಎಂದರು.
ಆಗ ಈ ಬಗ್ಗೆ ಇನ್ನಷ್ಟು ಚರ್ಚೆ, ಸಮಾಲೋಚನೆ ಅಗತ್ಯ ಎಂದು ತೀರ್ಮಾನಿಸಲಾಗಿತ್ತು. ಅಂತೆಯೇ, ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್ಗಳ ಅಭಿಪ್ರಾಯ ಕೇಳಲಾಗಿತ್ತು. ಆದರೆ, ಭಿನ್ನ ಅಭಿಪ್ರಾಯಗಳು ಬಂದವು. ಕೆಲ ರಾಜ್ಯಗಳು ವಿರೋಧಿಸಿದ್ದರೆ, ಕೆಲವು ಬೆಂಬಲಿಸಿದ್ದವು. ನಂತರ ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.