ನವದೆಹಲಿ: ಪಾಕಿಸ್ತಾನದಲ್ಲಿ ಕೋವಿಡ್ 19 ಸಾಂಕ್ರಾಮಿಕ ಹೆಚ್ಚಿದ ಕಾರಣ ಮುಂಜಾಗ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ವರ್ಷದ ಫೆಬ್ರುವರಿಯಲ್ಲಿ ನಂಕಾನಾ ಸಾಹಿಬ್ಗೆ ಭೇಟಿ ನೀಡುವ ಸಿಖ್ ಯಾತ್ರಿಕರ ‘ಜಾಥಾ’ಕ್ಕೆ ಸರ್ಕಾರ ಅನುಮತಿ ನಿರಾಕರಿಸಿತು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಮಂಗಳವಾರ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 1974ರ ‘ಧಾರ್ಮಿಕ ದೇಗುಲಗಳ ಭೇಟಿಗಾಗಿ ದ್ವಿಪಕ್ಷೀಯ ಶಿಷ್ಟಾಚಾರ’ ಒಪ್ಪಂದದಡಿ ಪ್ರತಿ ವರ್ಷ ನಾಲ್ಕು ಸಂದರ್ಭಗಳಲ್ಲಿ ಪಾಕಿಸ್ತಾನಕ್ಕೆ ಸಿಖ್ ‘ಜಾಥಾ’ ಕೈಗೊಳ್ಳಲು ಅವಕಾಶವಿದೆ. ಬೈಸಾಖಿ, ಗುರು ಅರ್ಜನ್ ದೇವ್ ಜಿ ಹುತಾತ್ಮರ ದಿನ, ಮಹಾರಾಜ ರಣಜಿತ್ ಸಿಂಗ್ ಜಿ ಅವರ ಬಾರ್ಸಿ ಮತ್ತು ಗುರುನಾನಕ್ ದೇವ್ ಜಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸಿಖ್ ‘ಜಾಥಾ’ ಕೈಗೊಳ್ಳಬಹುದಾಗಿದೆ ಎಂದು ರೆಡ್ಡಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ 18ರಂದು ನಡೆದ ಪಾಕಿಸ್ತಾನದ ನಂಕಾನಾ ಸಾಹಿಬ್ ಪ್ರಸ್ತಾವಿತ ಜಾಥಾ 1974ರ ದ್ವಿಪಕ್ಷೀಯ ಶಿಷ್ಟಾಚಾರದ ಒಪ್ಪಂದದ ವ್ಯಾಪ್ತಿಗೆ ಒಳಪಟ್ಟಿಲ್ಲ. ಅಲ್ಲದೆ, ಲಭ್ಯ ಮಾಹಿತಿಯ ಪ್ರಕಾರ, ಅಂತಹ ಯಾವುದೇ ‘ಜಾಥಾ’ ಈ ಹಿಂದೆ ಪಾಕಿಸ್ತಾನಕ್ಕೆ ಹೋಗಿಲ್ಲ. ಅಲ್ಲದೆ, ಕೋವಿಡ್ 19 ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದಾಗಿಯೇ ಯಾತ್ರೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.