ADVERTISEMENT

‌ಕೊರೊನಾ ಬಿಕ್ಕಟ್ಟು: ಪರಿಹಾರ ನೀಡುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲ ಎಂದ ಫಡಣವೀಸ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:58 IST
Last Updated 14 ಏಪ್ರಿಲ್ 2021, 10:58 IST
ದೇವೇಂದ್ರ ಫಡ್ನವಿಸ್‌
ದೇವೇಂದ್ರ ಫಡ್ನವಿಸ್‌   

ಮುಂಬೈ: ‘ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಜನರಿಗೆ ಪರಿಹಾರ ನೀಡುವಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ‌ (ಎಂವಿಎ) ಸರ್ಕಾರ ವಿಫಲವಾಗಿದೆ‘ ಎಂದು ಬಿಜೆಪಿ ಆರೋಪಿಸಿದೆ.

ಮಹಾರಾಷ್ಟ್ರದಾದ್ಯಂತ ಹದಿನೈದು ದಿನಗಳ ಲಾಕ್‌ಡೌನ್ ಮಾದರಿಯ ನಿರ್ಬಂಧಗಳನ್ನು ಬುಧವಾರ ಸಂಜೆಯಿಂದ ಜಾರಿಗೊಳಿಸುವುದಾಗಿ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಬಿಜೆಪಿ ಮುಖಂಡರು ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಕೇವಲ ಪ‍ರಿಹಾರ ಪ್ಯಾಕೇಜ್‌ಗಳನ್ನು ಪ್ರಕಟಿಸುವ ಮೂಲಕ ಈ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡಿದೆ‘ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್, ‘ಆಹಾರ ಭದ್ರತಾ ಯೋಜನೆಯ ವ್ಯಾಪ್ತಿಗೆ ಬಾರದ ಸುಮಾರು 1 ಕೋಟಿ ಜನರ ಕುರಿತು ಒಂದೇ ಒಂದು ಸಮಾಧಾನದ ಪದವನ್ನು ಉಚ್ಛರಿಸಿಲ್ಲ‘ ಎಂದು ಟೀಕಿಸಿದ್ದಾರೆ.

‘ಪಿಂಚಣಿ ಯೋಜನೆಗಳಿಗೆ ಭಾರತ ಸರ್ಕಾರದಿಂದ ಹಣ ಬರುತ್ತದೆ. ರಾಜ್ಯ ಸರ್ಕಾರ ಆ ಹಣವನ್ನು ಮುಂಗಡರೂಪದಲ್ಲಿ ನೀಡುತ್ತಿದೆ ಅಷ್ಟೇ. ಆದರೆ, ವಿದ್ಯುತ್ ಬಿಲ್, ಆಸ್ತಿ ತೆರಿಗೆ ಅಥವಾ ಜಿಎಸ್‌ಟಿಯಲ್ಲಿ ರಾಜ್ಯ ಸರ್ಕಾರ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ. ಅಂತೆಯೇ, ಸಲೂನ್ ಆಪರೇಟರ್‌ಗಳು, ಸಣ್ಣ ಉದ್ಯಮಿಗಳು, ಸಣ್ಣ ಮಾರಾಟಗಾರರಿಗೆ ಯಾವುದೇ ಹಣಕಾಸಿನ ನೆರವು ಘೋಷಿಸಿಲ್ಲ. ಈ ಎಲ್ಲ ಉದ್ಯಮಗಳು ಹೆಚ್ಚು ಕಾರ್ಮಿಕರ ಬಲದಿಂದ ನಡೆಯುವಂತಹವು. ಈ ಕಾರ್ಮಿಕರಿಗೆ ಬೇರೆ ಯಾವುದೇ ಗಳಿಕೆಯ ಮಾರ್ಗವಿರುವುದಿಲ್ಲ‘ ಎಂದು ಫಡಣವೀಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.