ADVERTISEMENT

‘ಅನಧಿಕೃತ ಬೇಹುಗಾರಿಕೆ ನಡೆಸಿಲ್ಲ’

ಪೆಗಾಸಸ್: ರಾಜ್ಯಸಭೆಯಲ್ಲಿ ಸರ್ಕಾರದ ಉತ್ತರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:09 IST
Last Updated 28 ನವೆಂಬರ್ 2019, 19:09 IST

ನವದೆಹಲಿ:‘ಭಾರತದಲ್ಲಿ ವಾಟ್ಸ್‌ಆ್ಯಪ್‌ನ ಯಾವುದೇ ಬಳೆಕದಾರರ ಮೇಲೆ, ಸರ್ಕಾರದ ಯಾವ ಸಂಸ್ಥೆಗಳೂ ಅನಧಿಕೃತವಾಗಿ ಬೇಹುಗಾರಿಕೆ ನಡೆಸಿಲ್ಲ’ಎಂದುಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ, ‘ಭಾರತ ಸರ್ಕಾರದ ಯಾವುದಾದರೂ ಸಂಸ್ಥೆ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದೆಯೇ’ ಎಂದು ಕಾಂಗ್ರೆಸ್‌ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ.

ಪೆಗಾಸಸ್ ಬಳಸಿಕೊಂಡು ನಡೆಸಲಾಗಿರುವ ಬೇಹುಗಾರಿಕೆಗೆ ತುತ್ತಾಗಿರುವವರ ಬಗ್ಗೆ ದಿಗ್ವಿಜಯ್‌ ಸಿಂಗ್ ಅವರು ಮಾಹಿತಿ ಕೇಳಿದರು.

‘ತಮ್ಮ ಮೇಲೆ ಬೇಹುಗಾರಿಕೆ ನಡೆದಿದೆ ಎಂದು ಯಾರೂ ದೂರು ನೀಡಿಲ್ಲ. ದೂರು ನೀಡಿದರೆ, ನಮ್ಮ ಸರ್ಕಾರ ತನಿಖೆ ನಡೆಸುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಸಚಿವರು ಉತ್ತರಿಸಿದ್ದಾರೆ.

ADVERTISEMENT

‘ಭಾರತ ಸರ್ಕಾರ ನೀಡಿದ್ದ ನೋಟಿಸ್‌ಗೆ ವಾಟ್ಸ್ಆ್ಯಪ್‌ ಉತ್ತರ ನೀಡಿತ್ತು. ಆದರೆ, ಯಾರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವರ ಅದರಲ್ಲಿ ಇರಲಿಲ್ಲ. ಬೇಹುಗಾರಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಮತ್ತೆ ನೋಟಿಸ್ ನೀಡಲಾಗಿದೆ’ ಎಂದು ರವಿಶಂಕರ್ ಪ್ರಸಾದ್ ಉತ್ತರಿಸಿದ್ದಾರೆ.

ಪೆಗಾಸಸ್‌ ಬಳಸಿಕೊಂಡು ಭಾರತದ 120 ಜನರು ಸೇರಿ ಜಗತ್ತಿನಾದ್ಯಂತ 1,400 ಜನರ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತು.

* ಪೆಗಾಸಸ್ ಅಭಿವೃದ್ಧಿಪಡಿಸಿದ್ದ ಎನ್‌ಎಸ್‌ಒ ಗ್ರೂಪ್‌ಗೂ ನೋಟಿಸ್

* ಬೇಹುಗಾರಿಕೆ ತಂತ್ರಾಂಶದ ತಾಂತ್ರಿಕ ವಿವರ ನೀಡುವಂತೆ ಸೂಚನೆ

* ಭಾರತೀಯ ಬಳಕೆದಾರರ ಮೇಲೆ ಪರಿಣಾಮದ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.