ನವದೆಹಲಿ: ದೇಶದಾದ್ಯಂತ ಇರುವ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ 100 ದಿನಗಳ ಅಭಿಯಾನಕ್ಕೆ ಜಲಶಕ್ತಿ ಸಚಿವಾಲಯ ಶುಕ್ರವಾರ ಚಾಲನೆ ನೀಡಿದೆ.
ಈ ಅಭಿಯಾನವನ್ನು ‘ಜನಾಂದೋಲನ’ವನ್ನಾಗಿಸಲು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದಾರೆ. ಅಭಿಯಾನವನ್ನು ಮುನ್ನಡೆಸುವಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ಗಳಿಗೆ ಪತ್ರ ಬರೆದಿರುವುದಾಗಿ ಶೇಖಾವತ್ ತಿಳಿಸಿದರು.
‘ಜಲ್ ಜೀವನ್ ಮಿಷನ್’ ಲಾಂಛನ ಬಿಡುಗಡೆ ಸಂದರ್ಭದಲ್ಲಿ ದೇಶದ ಎಲ್ಲ ಶಾಲೆಗಳಿಗೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, 100 ದಿನಗಳ ಅಭಿಯಾನದ ಮುಖಾಂತರ ಈ ಯೋಜನೆಗೆ ನಾವು ಚಾಲನೆ ನೀಡಿದ್ದೇವೆ. ಮುಂದಿನ ನೂರು ದಿನದೊಳಗಾಗಿ ಶಾಲೆಗಳಿಗೆ, ಅಂಗನವಾಡಿಗಳಿಗೆ ಪೈಪಿನ ಮುಖಾಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.