ADVERTISEMENT

ಕಾಶ್ಮೀರದಲ್ಲಿ ಸಿಲಿಂಡರ್ ಸಂಗ್ರಹಕ್ಕೆ ಸೂಚನೆ: ಜನರಲ್ಲಿ ಯುದ್ಧಭೀತಿ

ಯೋಧರಿಗಾಗಿ ಶಾಲೆಗಳ ತೆರವು

ಪಿಟಿಐ
Published 28 ಜೂನ್ 2020, 20:12 IST
Last Updated 28 ಜೂನ್ 2020, 20:12 IST
ಅಡುಗೆ ಅನಿಲ್ ಸಿಲಿಂಡರ್ –ರಾಯಿಟರ್ಸ್ ಚಿತ್ರ
ಅಡುಗೆ ಅನಿಲ್ ಸಿಲಿಂಡರ್ –ರಾಯಿಟರ್ಸ್ ಚಿತ್ರ   

ಶ್ರೀನಗರ: ಕಾಶ್ಮೀರಕ್ಕೆ ಎರಡು ತಿಂಗಳಿಗೆ ಅಗತ್ಯವಿರುವಷ್ಟು ಅಡುಗೆ ಅನಿಲ ಸಿಲಿಂಡರ್‌ಗಳನ್ನು (ಎಲ್‌ಪಿಜಿ) ಸಂಗ್ರಹಿಸಿಇಟ್ಟುಕೊಳ್ಳಿ ಎಂದು ಸರ್ಕಾರವು ತೈಲ ಕಂಪನಿಗಳಗೆ ಸೂಚನೆ ನೀಡಿದೆ. ಚೀನಾ ಜತೆ ಗಡಿ ಸಂಘರ್ಷ ನಡೆದ ಬೆನ್ನಲ್ಲೇ ಈ ಆದೇಶ ಬಂದಿರುವುದು ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.

‘ಭೂಕುಸಿತದಿಂದ ಹೆದ್ದಾರಿ ಬಂದ್ ಆಗುವುದರಿಂದ, ಸಿಲಿಂಡರ್ ಪೂರೈಕೆಗೆ ಅಡಚಣೆಯಾಗುತ್ತದೆ. ಈ ಅವಧಿಯಲ್ಲಿ ಸಿಲಿಂಡರ್ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಕಾಶ್ಮೀರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ. ‘ಇದು ಅತ್ಯಂತ ತುರ್ತು ಆದೇಶ’ ಎಂದೂ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಹಿಮಸುರಿದು ಹೆದ್ದಾರಿ–ರಸ್ತೆಗಳು ಬಂದ್ ಆಗುವುದರಿಂದ ಆ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಸಿಲಿಂಡರ್ ಸಂಗ್ರಹಕ್ಕೆ ಆದೇಶ ನೀಡಿರುವುದು ಜನರ ಕಳವಳಕ್ಕೆ ಕಾರಣವಾಗಿದೆ.

ADVERTISEMENT

‘ಎರಡು ತಿಂಗಳಿಗೆ ಅಗತ್ಯವಿರುವಷ್ಟು ಸಿಲಿಂಡರ್‌ಗಳನ್ನು ತ್ವರಿತವಾಗಿ ಪೂರೈಸಬೇಕಿದೆ. ಹೀಗಾಗಿ ಸಿಲಿಂಡರ್‌ಗಳಿಗೆ ಎಲ್‌ಪಿಜಿ ತುಂಬಿಸುವ ಕೆಲಸವನ್ನು ತ್ವರಿತಗೊಳಿಸಿ’ ಎಂದು ಎಲ್‌ಪಿಜಿ ಬಾಟ್ಲಿಂಗ್ ಘಟಕಗಳಿಗೂ ನಿರ್ದೇಶನ ನೀಡಲಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಹೊಂದಿಕೊಂಡಿರುವ ಕಾಶ್ಮೀರದ ಗಂದೇರ್‌ಬಲ್ ಜಿಲ್ಲೆಯಲ್ಲಿ ಅರೆಸೇನಾಪಡೆಯ ಯೋಧರನ್ನು ಇರಿಸಲು ಶಾಲೆಗಳನ್ನು ಬಿಟ್ಟುಒಡುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಪತ್ರ ಬರೆಯಲಾಗಿದೆ. ಅಮರನಾಥ ಯಾತ್ರೆಗೆ ಭದ್ರತೆ ಕಲ್ಪಿಸಲು ಈ ಯೋಧರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.ಯೋಧರನ್ನು ಇರಿಸಲು 16 ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ. ‘ಯೋಧರನ್ನು ಇರಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಈ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ನೀಡಿದ್ದಾರೆ. ಇದೂ ಸಹ ಜನರ ಕಳವಳ ಹೆಚ್ಚಾಗಲು ಕಾರಣವಾಗಿದೆ.

***
ಇದು ಬೇಸಿಗೆ, ರಸ್ತೆಗಳಲ್ಲಿ ಭೂಕುಸಿತ ಎಲ್ಲಿ ಉಂಟಾಗುತ್ತದೆ. ಇದು ಅತ್ಯಂತ ಕಳವಳದ ಸಂಗತಿ. ಕಾಶ್ಮೀರದ ಜನ ಇನ್ನೂ ಒಂದು ವರ್ಷ ಭಯದಿಂದ ಜೀವಿಸಲು ಸಾಧ್ಯವಿಲ್ಲ. ಈ ಬೆಳವಣಿಗೆ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು‌.
–ಒಮರ್ ಅಬ್ದುಲ್ಲಾ, ಎನ್‌ಸಿ ಮುಖಂಡ

***
ಅಮರನಾಥ ಯಾತ್ರೆಗೆ ಸಿದ್ಧತೆ ಹೇಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಇಷ್ಟು ಯೋಧರನ್ನು ಕರೆಸುತ್ತಿರುವುದು ಯಾತ್ರೆಯ ಭದ್ರತೆಗಂತೂ ಅಲ್ಲ. ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು.
–ಓವೈಸಿ ಮಿರ್, ಗಂದೇರ್‌ಬಲ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.