ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್ಪಿಎಸ್) ಕೇಂದ್ರ ಸರ್ಕಾರದ ಪಾಲನ್ನು ನೌಕರರ ಮೂಲ ವೇತನದ ಶೇ 14ರಷ್ಟಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೊದಲು ಇದು ಶೇ 10ರಷ್ಟಿತ್ತು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಹೇಳಿದ್ದಾರೆ.
ಈ ನಿರ್ಧಾರದಿಂದ 2019–2020ನೇ ವರ್ಷದಲ್ಲಿ ಸರ್ಕಾರಕ್ಕೆ ₹2,840 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ. ಸಂಚಿತ ನಿಧಿಯಿಂದನಿವೃತ್ತಿ ಸಮಯದಲ್ಲಿಹಿಂಪಡೆಯುವ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
‘ಈ ಯೋಜನೆಗೆ ನೌಕರರ ಕನಿಷ್ಠ ಪಾಲು ಶೇ 10ರಷ್ಟೇ ಇರಲಿದೆ’ ಎಂದು ಜೇಟ್ಲಿ ಹೇಳಿದ್ದಾರೆ.
ಈ ಮೂಲಕ ಚುನಾವಣಾ ವರ್ಷದಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಕೇಂದ್ರವು ಭರ್ಜರಿ ಕೊಡುಗೆ ನೀಡಿದೆ. 18 ಲಕ್ಷ ನೌಕರರಿಗೆ ಇದರ ಪ್ರಯೋಜನ ಸಿಗಲಿದೆ.
ಅಲ್ಲದೆ, ಸರ್ಕಾರಿ ನೌಕರರಿಗೆ ನಿವೃತ್ತಿ ಸಮಯದಲ್ಲಿ ಹೆಚ್ಚಿನ ಮೊತ್ತವನ್ನು ಹಿಂತೆಗೆದುಕೊಳ್ಳಲು ಈಗ ಅವಕಾಶ ನೀಡಲಾಗಿದೆ. ನಿವೃತ್ತಿಯ ಸಮಯದಲ್ಲಿ ಶೇ 60ರಷ್ಟು ಸಂಚಿತ ನಿಧಿಯನ್ನು ಒಂದೇ ಬಾರಿಗೆ ತೆಗೆದುಕೊಳ್ಳಲು ಕೇಂದ್ರ ಅವಕಾಶ ಮಾಡಿಕೊಟ್ಟಿದೆ. ಇದು, ಪ್ರಸ್ತುತ ಶೇ 40ರಷ್ಟಿದೆ.
‘ಒಂದೇ ಬಾರಿಗೆ ಹಿಂಪಡೆಯುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಮಿತಿಯನ್ನು ಶೇ 60ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನಿವೃತ್ತಿ ಸಮಯದಲ್ಲಿ ಹಿಂಪಡೆಯುವಸಂಪೂರ್ಣ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಇದೊಂದು ಪ್ರಮುಖ ಬದಲಾವಣೆ’ ಎಂದು ಜೇಟ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.