ಮೀರಠ್: ಆಹಾರದಲ್ಲಿ ಅಮಲಿನ ಪದಾರ್ಥ ಬೆರೆಸಿ 17 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಇಲ್ಲಿನ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
ಪ್ರಾಂಶುಪಾಲರು ನ.23ರಂದು 9 ವಿದ್ಯಾರ್ಥಿನಿಯರನ್ನು ಬೃಂದಾವನಕ್ಕೆ ಪ್ರವಾಸಕ್ಕೆ ಕರೆದೊಯ್ದು, ಉಳಿದುಕೊಳ್ಳಲು ಹೋಟೆಲ್ನಲ್ಲಿ ಎರಡು ಕೊಠಡಿಗಳನ್ನು ನಿಗದಿಪಡಿಸಿದ್ದರು. ಒಂದು ಕೊಠಡಿಯಲ್ಲಿ ಎಂಟು ವಿದ್ಯಾರ್ಥಿನಿಯರು ಉಳಿದುಕೊಂಡಿದ್ದರು. ಮತ್ತೊಂದು ಕೋಣೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಪ್ರಾಂಶುಪಾಲರು ಉಳಿದುಕೊಂಡಿದ್ದರು. ಇಲ್ಲಿ ವಿದ್ಯಾರ್ಥಿನಿ ಸೇವಿಸುವ ಆಹಾರದಲ್ಲಿ ಅಮಲಿನ ಪದಾರ್ಥ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಕೆ ವಿರೋಧ ವ್ಯಕ್ತಪಡಿಸಿದಾಗ ಪರೀಕ್ಷೆಯಲ್ಲಿ ನಪಾಸು ಮಾಡುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಸಿದ್ದರು ಎಂದು ಹಸ್ತಿನಾಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
ವಿದ್ಯಾರ್ಥಿನಿ ತಂದೆ ನೀಡಿದ ದೂರಿನ ಅನ್ವಯ ಶನಿವಾರ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಾಂಶುಪಾಲರು ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.