ನವದೆಹಲಿ: ‘ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ತಡೆಯಲು ಸರ್ಕಾರ ಶೀಘ್ರದಲ್ಲೇ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲಿದೆ. ಈ ರೀತಿಯಲ್ಲಿ ಸೇವಾ ಶುಲ್ಕ ಪಡೆಯುವುದು ಗ್ರಾಹಕರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಗುರುವಾರ ಹೇಳಿದ್ದಾರೆ.
ರೆಸ್ಟೋರೆಂಟ್ಗಳ ಸಂಘಗಳ ಪ್ರತಿನಿಧಿಗಳು ಹಾಗೂ ಗ್ರಾಹಕರೊಂದಿಗೆ ಸಭೆ ನಡೆಸಿದ ನಂತರ ಸಿಂಗ್ ಅವರು, ‘ಈ ಪದ್ಧತಿ ಕಾನೂನುಬದ್ಧವಾಗಿದೆ ಎಂದು ಸಂಘಗಳು ಹೇಳಿಕೊಂಡರೂ ಗ್ರಾಹಕರ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಗ್ರಾಹಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಶೀಘ್ರದಲ್ಲೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತೇವೆ. 2017ರ ಮಾರ್ಗಸೂಚಿಗಳನ್ನು ರೆಸ್ಟೋರೆಂಟ್ಗಳು ಜಾರಿಗೊಳಿಸಿಲ್ಲ’ ಎಂದು ಹೇಳಿದರು.
ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ (ಎನ್ಆರ್ಎಐ), ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ) ಮತ್ತು ಮುಂಬೈ ಗ್ರಾಹಕ್ ಪಂಚಾಯತ್ ಹಾಗೂ ಪುಷ್ಪಾ ಗಿರಿಮಾಜಿ ಸೇರಿದಂತೆ ಗ್ರಾಹಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.