ADVERTISEMENT

ಚಾಲಕರ ಅರೆನಿದ್ರಾವಸ್ಥೆ ಸ್ಥಿತಿ ಗುರುತಿಸಲು ವ್ಯವಸ್ಥೆ: ಕೇಂದ್ರದಿಂದ ಸಮಿತಿ ರಚನೆ

ರಸ್ತೆ ಅಪಘಾತ ತಗ್ಗಿಸಲು ಕೇಂದ್ರ ಭೂಸಾರಿಗೆ ಸಚಿವಾಲಯದ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 16:15 IST
Last Updated 10 ಆಗಸ್ಟ್ 2022, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಾಲಕರ ತಪ್ಪಿನಿಂದಾಗಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ, ಚಾಲಕರ ಅರೆನಿದ್ರಾವಸ್ಥೆ ಹಾಗೂ ಜಾಗರೂಕ ಸ್ಥಿತಿಯನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳುವ ಸಂಬಂಧ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಭೂಸಾರಿಗೆ ಸಚಿವಾಲಯ ಮುಂದಾಗಿದೆ. ಈ ಸಂಬಂಧ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ‘ಆಟೊಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಕಮಿಟಿ’ಯನ್ನು (ಎಐಎಸ್‌ಸಿ) ರಚಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಪ್ರವಾಸೋದ್ಯಮದ ಮೇಲಿನ ಸಂಸದೀಯ ಸಮಿತಿಗೆ ಸಚಿವಾಲಯ ತಿಳಿಸಿದೆ.

ರಸ್ತೆ ಅಪಘಾತಗಳನ್ನು ತಡೆಗಟ್ಟಲುಚಾಲನಾ ಅವಧಿಯನ್ನು ನಿಯಂತ್ರಿಸುವುದು ಅಗತ್ಯ. ಇದಕ್ಕಾಗಿ ಪ್ರತಿದಿನ ಎಷ್ಟು ಗಂಟೆಗಳ ಕಾಲ ವಾಹನಗಳ ಚಾಲನೆ ಮಾಡಲಾಗುತ್ತದೆ ಎಂಬುದರ ಮೇಲೆ ನಿಗಾ ಇಡಬೇಕು ಹಾಗೂ ದಿನವೊಂದಕ್ಕೆ ಎಷ್ಟು ಗಂಟೆಗಳಷ್ಟು ಚಾಲನೆ ಮಾಡಬೇಕು ಎಂಬುದನ್ನು ನಿಗದಿ ಮಾಡಬೇಕು ಎಂಬ ಅಂಶಗಳನ್ನು ಒಳಗೊಂಡ ವರದಿಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಸಮಿತಿ ಮಂಡಿಸಿದೆ.

‘ದೇಶದಲ್ಲಿ ಉತ್ತಮ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದ್ದರೂ, ಪದೇಪದೇ ಸಂಭವಿಸುತ್ತಿರುವ ಭೀಕರ ಅಪಘಾತಗಳಿಂದಾಗಿ ರಸ್ತೆಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ’ ಎಂದೂ ಸಮಿತಿ ತನ್ನ ವರದಿಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.