ನವದೆಹಲಿ: ‘ದೇಶದಲ್ಲಿ ಕೋವಿಡ್–19 ಸ್ಥಿತಿ ಅಷ್ಟೇನೂ ಗಂಭೀರವಾಗಿಲ್ಲ ಎಂಬ ಗ್ರಹಿಕೆಯನ್ನು ಪೋಷಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರನ್ನು ಅಭಿನಂದಿಸಿದ ಅವರು, ‘ಕೊರೊನಾ ಪಿಡುಗಿನಿಂದ ಜನರನ್ನು ಪಾರುಮಾಡಲು ವೈದ್ಯರು ತಮ್ಮ ಜೀವವನ್ನೂ ಲೆಕ್ಕಿಸದೆ ಅಹಿಂಸಾತ್ಮಕ ಸೈನ್ಯದಂತೆ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಯನ್ನು ಮುಚ್ಚಿಡುವ ಬದಲು, ನಾವು ಅದನ್ನು ಒಪ್ಪಿಕೊಳ್ಳಬೇಕು, ಆನಂತರ ಸರಿಯಾಗಿ ವಿಶ್ಲೇಷಿಸಿ ಅದರ ವಿರುದ್ಧ ಹೋರಾಡಬೇಕು ಎಂಬುದು ನನ್ನ ನಿಲುವು’ ಎಂದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡುವುದರಿಂದ ತಮ್ಮ ಕುಟುಂಬದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯಲು ರಾಹುಲ್ ಅವರು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ದೆಹಲಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ನಾಲ್ವರು ನರ್ಸ್ಗಳ ಜತೆಗೆ ವಿಡಿಯೊ ಸಂವಾದ ನಡೆಸಿದರು.
ಕೋವಿಡ್ಗೆ ಒಳಗಾಗಿ ಮೃತಪಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸರ್ಕಾರವು ಘೋಷಿಸಿದ ಪರಿಹಾರದ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಪತ್ರ ಮುಖೇನ ಸರ್ಕಾರಗಳಿಗೆ ಒತ್ತಾಯ ಮಾಡುವುದಾಗಿಯೂ ಅವರು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.