ADVERTISEMENT

ಜಿಎಸ್‌ಟಿ ಮಂಡಳಿ ಶಿಫಾರಸು ಪಾಲನೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 19 ಮೇ 2022, 18:41 IST
Last Updated 19 ಮೇ 2022, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರವು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಕ್ಕೆ ಇದೆ. ಹೀಗಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಮಾಡುವ ಶಿಫಾರಸುಗಳು ಅವುಗಳ ಪಾಲಿಗೆ ಕಡ್ಡಾಯವಾಗಿ ಪಾಲಿಸಬೇಕಾದವು ಅಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸಾರಿದೆ.

‘ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ಮನವೊಲಿಸುವಂತೆ ಇರಬೇಕು ಎಂಬುದು ಸಂಸತ್ತಿನ ನಿಲುವಾಗಿತ್ತು’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಮಹತ್ವದ ಈ ತೀರ್ಪಿನಲ್ಲಿ ಹೇಳಿದೆ.

‘ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ನಡೆಸುವ ಮಾತುಕತೆಗಳನ್ನು ಆಧರಿಸಿ ಜಿಎಸ್‌ಟಿ ಮಂಡಳಿ ಶಿಫಾರಸು ಮಾಡುತ್ತದೆ. ಅವು ಶಿಫಾರಸಿನ ಸ್ವರೂಪವನ್ನು ಮಾತ್ರ ಹೊಂದಿವೆ. ಆ ಶಿಫಾರಸುಗಳು, ಪಾಲಿಸಲೇಬೇಕಾದ ಆಜ್ಞೆ ಎಂಬಂತೆ ಕಾಣುವುದು ಹಣಕಾಸಿನ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಜಿಎಸ್‌ಟಿ ವಿಚಾರವಾಗಿ ಶಾಸನ ತರುವ ಸಮಾನ ಅಧಿಕಾರವು ಈ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೂ ಕೇಂದ್ರಕ್ಕೂ ಇದೆ’ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರೂ ಈ ಪೀಠದಲ್ಲಿದ್ದರು.

ADVERTISEMENT

ಸಂವಿಧಾನ ತಿದ್ದುಪಡಿ ಕಾಯ್ದೆ – 2016ರ ಮೂಲಕ ಸೇರಿಸಲಾದ ಸಂವಿಧಾನದ 246(ಎ) ವಿಧಿಯು, ಜಿಎಸ್‌ಟಿ ವಿಚಾರವಾಗಿ ಕಾನೂನು ರೂಪಿಸುವ ಅಧಿಕಾರವನ್ನು ಸಂಸತ್ತಿಗೂ ರಾಜ್ಯಗಳ ಶಾಸನಸಭೆಗಳಿಗೂ ಒಟ್ಟೊಟ್ಟಿಗೇ ನೀಡಿದೆ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಒಕ್ಕೂಟ ವ್ಯವಸ್ಥೆಯ ಯಾವು ದಾದರೂ ಒಂದು ಘಟಕವು ತೀರ್ಮಾನ ಕೈಗೊಳ್ಳುವ ವಿಚಾರದಲ್ಲಿ ಹೆಚ್ಚಿನ ಅಧಿಕಾರ ಹೊಂದಿರಬೇಕು ಎಂದೇನೂ ಇಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ. ‘ಭಾರತದ ಒಕ್ಕೂಟ ವ್ಯವಸ್ಥೆಯು ಸಹಕಾರ ಹಾಗೂ ಅಸಹಕಾರ ಒಕ್ಕೂಟ ವ್ಯವಸ್ಥೆಗಳ ನಡುವಿನ ಮಾತುಕತೆ ಇದ್ದಂತೆ’ ಎಂದು ಬಣ್ಣಿಸಿದೆ.

ಭಾರತವು ಬಹುಪಕ್ಷಗಳ ವ್ಯವಸ್ಥೆಯನ್ನು ಹೊಂದಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷವೊಂದು ಒಂದು ರಾಜ್ಯದಲ್ಲಿ ಅಧಿಕಾರದಲ್ಲಿ ಇರಬಹುದು, ಇಲ್ಲದಿರಬಹುದು. ರಾಜ್ಯಗಳಿಗೆ ಕಡಿಮೆಅಧಿಕಾರ ಇದೆ ಎಂದು ಭಾವಿಸುವುದಾದರೂ, ಕೇಂದ್ರದ ಅಪ್ಪಣೆಗಳಿಗೆ ಅವು ಸಂವಿಧಾನದ ವ್ಯಾಪ್ತಿಯಲ್ಲಿ ಬೇರೆ ಬೇರೆ ರಾಜಕೀಯ ಮಾರ್ಗಗಳ ಮೂಲಕ ‍ಪ್ರತಿರೋಧ ಒಡ್ಡಬಹುದು ಎಂದು ಕೋರ್ಟ್‌ ಹೇಳಿದೆ.

153 ಪುಟಗಳ ಈ ತೀರ್ಪನ್ನು ನ್ಯಾಯಪೀಠದ ಪರವಾಗಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಬರೆದಿದ್ದಾರೆ. ಜಿಎಸ್‌ಟಿ ಮಂಡಳಿಯು ತೀರ್ಮಾನ ಕೈಗೊಳ್ಳುವ ಪ್ರಾಧಿಕಾರ ಆಗಿದ್ದಿದ್ದರೆ, ಅದರ ಶಿಫಾರಸುಗಳು ಶಾಸನಗಳಾಗಬೇಕು ಎಂಬುದಾಗಿದ್ದರೆ, ಅಂತಹ ಅಂಶವು ಸಂವಿಧಾನದ 246(ಎ), 279(ಎ) ವಿಧಿಗಳಲ್ಲಿ ಅಡಕವಾಗಿರುತ್ತಿತ್ತು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಬರೆದಿದ್ದಾರೆ.

ತಮಿಳುನಾಡು, ಕೇರಳ ಸ್ವಾಗತ

ಮದುರೈ (ಪಿಟಿಐ): ಜಿಎಸ್‌ಟಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸ್ವಾಗತಿಸಿವೆ. ‘ಸುಪ್ರೀಂ ಕೋರ್ಟ್‌ ತೀರ್ಪು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಎತ್ತಿಹಿಡಿದಿದೆ’ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ. ‘ಜಿಎಸ್‌ಟಿ ಮಂಡಳಿಯ ಕೆಲಸ ಕೇವಲ ಶಿಫಾರಸು ಮಾಡುವುದು. ಅದು ತನ್ನ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಮೇಲೆ ಹೇರುವಂತಿಲ್ಲ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಜಿಎಸ್‌ಟಿ ಮಂಡಳಿಗಿರುವ ಅಧಿಕಾರ ಮತ್ತು ಸರ್ಕಾರಗಳ ತೆರಿಗೆ ಹಕ್ಕುಗಳ ಕುರಿತು ನಮಗೆ ಮೊದಲೇ ತಿಳಿದಿತ್ತು. ಅದನ್ನೇ ಸುಪ್ರೀಂ ಕೋರ್ಟ್‌ ಪ್ರಮಾಣೀಕರಿಸಿದೆ’ ಎಂದು ಅವರು ಹೇಳಿದ್ದಾರೆ.

ರಾಜ್ಯಗಳು ಮತ್ತು ಜನರ ಒಕ್ಕೂಟ ಹಕ್ಕುಗಳನ್ನು ಈ ತೀರ್ಪು ಎತ್ತಿ ಹಿಡಿದಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.