ADVERTISEMENT

ಕುತ್ತಿಗೆಗೆ ಗಾಳಿ‍‍ಪಟ ದಾರ ಸಿಲುಕಿ 6 ಸಾವು: 176 ಜನರಿಗೆ ಗಾಯ

ಪಿಟಿಐ
Published 16 ಜನವರಿ 2023, 15:23 IST
Last Updated 16 ಜನವರಿ 2023, 15:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ‘ಗುಜರಾತ್‌ನಲ್ಲಿ ನಡೆಯುತ್ತಿರುವ ಉತ್ತರಾಯಣ ಹಬ್ಬದ ವೇಳೆ ಗಾಳಿಪಟ ಹಾರಿಸುವಾಗ ಅದರ ದಾರದಿಂದ ಕುತ್ತಿಗೆ ಸೀಳಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 6 ಜನ ಮೃತರಾಗಿದ್ದು, 176 ಮಂದಿ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ವಾರಾಂತ್ಯದಂದು ಹಬ್ಬದ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಮೇಲೆ ಗಾಳಿಪಟಗಳನ್ನು ಹಾರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೆಲವರು ಪಟಕ್ಕೆ ಹರಿತವಾದ ದಾರ ಬಳಸಿದ್ದರು. ಅದು ಕುತ್ತಿಗೆಗೆ ಸಿಲುಕಿಕೊಂಡಿದ್ದರಿಂದ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

‘ಭಾವ್‌ನಗರದಲ್ಲಿ ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ 2 ವರ್ಷದ ಕೀರ್ತಿ ಎಂಬಾಕೆಯ ಕುತ್ತಿಗೆಗೆ ಗಾಳಿಪಟದ ದಾರ ಸುತ್ತಿಕೊಂಡಿತ್ತು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಭಾನುವಾರ ಅಸುನೀಗಿದ್ದಾಳೆ. ಗಾಳಿಪಟದ ದಾರದಿಂದಾಗಿ ವಿಸ್‌ನಗರದಲ್ಲಿ ತಾಯಿಯೊಂದಿಗೆ ನೆಡೆದುಕೊಂಡು ಹೋಗುತ್ತಿದ್ದ 3 ವರ್ಷದ ಕಿಸ್ಮತ್‌ಳ ಕುತ್ತಿಗೆ ಸೀಳಿತ್ತು. ಆಕೆ ಆಸ್ಪತ್ರೆಗೆ ಸಾಗಿಸುವುದರೊಳಗೆ ಮೃತಳಾಗಿದ್ದಳು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ರಾಜ್‌ಕೋಟ್‌ನಲ್ಲಿ ಪಾಲಕರೊಂದಿಗೆ ಗಾಳಿಪಟ ಹಿಡಿದು ಬೈಕ್‌ನಲ್ಲಿ ತೆರಳುತ್ತಿದ್ದ 7 ವರ್ಷದ ರಿಷಭ್‌ ವರ್ಮಾ ಎಂಬಾತನ ಕುತ್ತಿಗೆಗೆ ದಾರ ಸುತ್ತಿಕೊಂಡು ಆತ ಮೃತನಾಗಿದ್ದಾನೆ. ವಡೋದರ, ಕಚ್‌ ಹಾಗೂ ಗಾಂಧಿನಗರ ಜಿಲ್ಲೆಗಳಲ್ಲೂ ಇದೇ ಬಗೆಯ ಘಟನೆ ನಡೆದು ಮೂವರು ಪುರುಷರು ಮೃತರಾಗಿದ್ದಾರೆ’ ಎಂದೂ ತಿಳಿಸಿದ್ದಾರೆ.

ಗಾಳಿಪಟದ ದಾರಗಳಿಂದಾಗಿ 130 ಜನರಿಗೆ ಗಾಯಗಳಾಗಿವೆ. 46 ಮಂದಿ ಗಾಳಿಪಟ ಹಾರಿಸು ಭರದಲ್ಲಿ ಎತ್ತರದ ಸ್ಥಳದಿಂದ ಬಿದ್ದು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.