ADVERTISEMENT

ರ‍್ಯಾಲಿ ಮುನ್ನಡೆಸಿದ್ದ ಪ್ರಕರಣ: ಜಿಗ್ನೇಶ್‌ ಮೇವಾನಿ ಖುಲಾಸೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 14:31 IST
Last Updated 29 ಮಾರ್ಚ್ 2023, 14:31 IST
ಜಿಗ್ನೇಶ್‌ ಮೇವಾನಿ
ಜಿಗ್ನೇಶ್‌ ಮೇವಾನಿ   
ಅಹಮದಾಬಾದ್‌: ಪೊಲೀಸರ ಅನುಮತಿ ಪಡೆಯದೇ ಸಾರ್ವಜನಿಕ ರ‍್ಯಾಲಿಯೊಂದನ್ನು ಮುನ್ನಡೆಸಿದ ಪ್ರಕರಣದಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕ, ದಲಿತ ನಾಯಕ ಜಿಗ್ನೇಶ್‌ ಮೇವಾನಿ ಮತ್ತು ಇತರ ಒಂಬತ್ತು ಜನರನ್ನು ಮೆಹ್ಸಾನಾ ಸೆಷನ್ಸ್‌ ನ್ಯಾಯಾಲಯವು ಬುಧವಾರ ಖುಲಾಸೆಗೊಳಿಸಿತು.
ಇದಕ್ಕೂ ಮೊದಲು ಈ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದ ಸ್ಥಳೀಯ ನ್ಯಾಯಾಲಯವು ಮೇವಾನಿ ಮತ್ತು ಇತರರು ದೋಷಿ ಘೋಷಿಸಿ, ಮೂರು ವರ್ಷಗಳ ಸಜೆ ವಿಧಿಸಿತ್ತು. ಈ ಆದೇಶವನ್ನು ರದ್ದುಗೊಳಿಸಿದ ಸೆಷನ್ಸ್‌ ನ್ಯಾಯಾಲಯವು ಈ ಪ್ರಕರಣವು ಆಧಾರರಹಿತವಾಗಿದೆ ಎಂದು ಹೇಳಿದೆ.
ಸೆಷನ್ಸ್‌ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಟ್ವೀಟ್‌ ಮಾಡಿರುವ ಮೇವಾನಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಡಿ ವಿಮರ್ಶೆ, ಚರ್ಚೆ ಮತ್ತು ವಾದಮಂಡನೆಗೆ ಇರುವ ಅವಕಾಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ ಮತ್ತು ನಮ್ಮ ಮೇಲೆ ದಾಖಲಿಸಲಾಗಿದ್ದ ಪ್ರಕರಣವನ್ನು ಆಧಾರರಹಿತ ಎಂದು ಹೇಳಿದೆ’ ಎಂದಿದ್ದಾರೆ.
ಮೇವಾನಿ ನೇತೃತ್ವದ ‘ರಾಷ್ಟ್ರೀಯ ದಲಿತ್‌ ಅಧಿಕಾರ ಮಂಚ’ ಎಂಬ ಹೆಸರಿನ ಸಂಘಟನೆಯು 2017ರ ಜುಲೈ 12ರಂದು ‘ಆಜದಿ ಕೂಚ್‌’ ಎಂಬ ರ‍್ಯಾಲಿ ಕೈಗೊಂಡಿತ್ತು. ಈ ರ‍್ಯಾಲಿಗೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಆಯೋಜಕರು ಈ ರ‍್ಯಾಲಿ ನಡೆಸಿದ್ದರು. ಈ ಕಾರಣಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 143 ಅಡಿ (ಕಾನೂನು ಬಾಹಿರವಾಗಿ ಗುಂಪು ಸೇರುವಿಕೆ) 10 ಜನರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.