ADVERTISEMENT

ಗುಜರಾತ್‌ ನಕಲಿ ಮದ್ಯ ಪ್ರಕರಣ: ಇಬ್ಬರು ಎಸ್ಪಿಗಳ ವರ್ಗಾವಣೆ

ಪಿಟಿಐ
Published 28 ಜುಲೈ 2022, 14:14 IST
Last Updated 28 ಜುಲೈ 2022, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ನಕಲಿ ಮದ್ಯ ಸೇವನೆಯಿಂದ ಈವರೆಗೂ 42 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಗುಜರಾತ್‌ ಗೃಹ ಸಚಿವಾಲಯವು ಬೊಟಾಡದ ಮತ್ತು ಅಹಮದಾಬಾದ್‌ನ ಎಸ್ಪಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜತೆಗೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದೆ.

‘ಕರ್ತವ್ಯದ ಬಗೆಗೆ ನಿರ್ಲಕ್ಷ್ಯ, ರಾಸಾಯನಿಕ ಮಿಶ್ರಣದ ಮದ್ಯದ ರವಾನೆ, ಮಾರಾಟ ಮತ್ತು ಸೇವನೆಯನ್ನು ತಡೆಯುವುದರಲ್ಲಿ ವಿಫಲರಾಗಿದ್ದಕ್ಕಾಗಿ ಅಮಾನತು ಮಾಡಲಾಗಿದೆ’ ಎಂದು ಗೃಹ ಸಚಿವಾಲಯ ಹೇಳಿದೆ.

‘ಬೊಟಾಡದ ಎಸ್ಪಿ ಕರಣ್‌ರಾಜ್‌ ವಾಘೇಲಾ ಮತ್ತು ಅಹಮದಾಬಾದ್‌ ಎಸ್ಪಿ ವಿರೇಂದ್ರ ಸಿಂಗ್‌ ಯಾದವ್‌ ಅವರನ್ನು ಹಾಗೂ ಇಬ್ಬರು ಉಪಪೊಲೀಸ್‌ ವರಿಷ್ಠಾಧಿಕಾರಿಗಳನ್ನೂ ಅಮಾನತು ಮಾಡಲಾಗಿದೆ’ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜ್‌ಕುಮಾರ್‌ ತಿಳಿಸಿದರು.

ADVERTISEMENT

‘ಬಾವ್‌ನಗರ, ಬೊಟಾಡ ಮತ್ತು ಅಹಮದಾಬಾದ್‌ನ ಆಸ್ಪತ್ರೆಗಳಲ್ಲಿ ಇನ್ನೂ ಒಟ್ಟು 97 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತ್ವರಿತ ನ್ಯಾಯದಾನಕ್ಕಾಗಿ ಇನ್ನು ಹತ್ತು ದಿನಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು. ಜತೆಗೆ, ಸರ್ಕಾರವು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅನ್ನು ನೇಮಿಸಲಿದೆ. ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದೆ’ ಎಂದು ಗುಜರಾತ್‌ನ ಗೃಹ ಸಚಿವ ಹರ್ಷ್‌ ಸಂಘವಿ ಬುಧವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.