ADVERTISEMENT

ದೀಪಿಕಾ ತಲೆ ಕಡಿದವರಿಗೆ ₹10 ಕೋಟಿ ಕೊಡುವೆ ಎಂದಿದ್ದ ವ್ಯಕ್ತಿ ಮತ್ತೆ ಬಿಜೆಪಿಗೆ

ರಾಜೀನಾಮೆ ತಿರಸ್ಕೃತ

ಏಜೆನ್ಸೀಸ್
Published 9 ಅಕ್ಟೋಬರ್ 2018, 9:44 IST
Last Updated 9 ಅಕ್ಟೋಬರ್ 2018, 9:44 IST
ಸೂರಜ್ ಪಾಲ್ ಅಮು
ಸೂರಜ್ ಪಾಲ್ ಅಮು   

ನವದೆಹಲಿ:ಪದ್ಮಾವತ್ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ತಲೆ ಕಡಿದವರಿಗೆ ₹10 ಕೋಟಿ ಕೊಡುತ್ತೇನೆ ಎಂದಿದ್ದ ಹರಿಯಾಣದ ಬಿಜೆಪಿ ಮುಖಂಡ ಸೂರಜ್ ಪಾಲ್ ಅಮು ನೀಡಿದ್ದ ರಾಜೀನಾಮೆಯನ್ನು ಪಕ್ಷ ತಿರಸ್ಕರಿಸಿದೆ.

‘ಬಿಜೆಪಿಯ ಹರಿಯಾಣ ಘಟಕದ ವಿವಿಧ ಹುದ್ದೆಗಳಿಗೆ ಹಲವು ತಿಂಗಳುಗಳ ಹಿಂದೆ ರಾಜೀನಾಮೆ ನೀಡಿದ್ದೆ. ಬಿಜೆಪಿಯ ಹರಿಯಾಣ ಘಟಕದ ಮುಖ್ಯಸ್ಥ ಸುಭಾಷ್ ಬರಾಲಾ ಅವರು ಅದನ್ನು ಇಂದು ತಿರಸ್ಕರಿಸಿದ್ದಾರೆ. ವಿದ್ಯಾರ್ಥಿ ಘಟಕದಿಂದ ತೊಡಗಿ 29–30 ವರ್ಷಗಳಿಂದಪಕ್ಷದ ವಿವಿಧ ಹುದ್ದೆಗಳಲ್ಲಿದ್ದೆ. ಕಳೆದ 8 ತಿಂಗಳು ಪಕ್ಷದಿಂದ ದೂರವಿರುವುದು ಬಹಳ ಕಷ್ಟವಾಗಿತ್ತು. ಆದರೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದೆ. ಇದೀಗ ಮರಳಿ ಮನೆ ಸೇರಿದಂತಾಗಿದೆ’ ಎಂದು ಸೂರಜ್ ಹೇಳಿದ್ದಾರೆ.

ಕರ್ಣಿ ಸೇನಾದ ಮುಖ್ಯಸ್ಥ ಆಗಿರುವ ಸೂರಜ್ ಪದ್ಮಾವತ್ ಚಿತ್ರದ ವಿರುದ್ಧದ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.ಹೇಳಿಕೆ ಕುರಿತು ಕಾರಣ ಕೇಳಿಬಿಜೆಪಿಯ ಮುಖ್ಯ ಮಾಧ್ಯಮ ಸಂಯೋಜಕರೂ ಆಗಿರುವ ಅವರಿಗೆ ನೋಟಿಸ್ ನೀಡಲಾಗಿತ್ತು. ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ADVERTISEMENT

ಪದ್ಮಾವತ್‌ ಸಿನಿಮಾ ಬಿಡುಗಡೆಗೂ ಮುನ್ನ ಶಾಂತಿ ಕದಡಿದ ಆರೋಪದಲ್ಲಿ ಸೂರಜ್‌ ಅನ್ನು ಜನವರಿಯಲ್ಲಿ ಗುರುಗ್ರಾಮ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ರಜಪೂತ ರಾಣಿ ಪದ್ಮಾವತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಕರ್ಣಿಸೇನಾ ಸೇರಿ ಹಲವು ಸಂಘಟನೆಗಳು ಪದ್ಮಾವತ್ ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.