ADVERTISEMENT

ರಾಜಕಾರಣಿಗಳಿಂದ ಔಷಧ ಖರೀದಿ,ದಾಸ್ತಾನು:ತನಿಖೆಗೆ ಹೈಕೋರ್ಟ್‌ ಸೂಚನೆ

ಪಿಟಿಐ
Published 24 ಮೇ 2021, 12:24 IST
Last Updated 24 ಮೇ 2021, 12:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ –19 ಚಿಕಿತ್ಸೆಗೆ ಔಷಧ ಕೊರತೆ ಇರುವಂತೆ ರಾಜಕಾರಣಿಗಳು ಸಗಟು ರೂಪದಲ್ಲಿ ಔಷಧ ಖರೀದಿಸಿ, ಸಂಗ್ರಹಿಸುತ್ತಿರುವ ಬಗ್ಗೆ ತನಿಖೆಗೆ ದೆಹಲಿ ಹೈಕೋರ್ಟ್‌ ಔಷಧ ನಿಯಂತ್ರಕರಿಗೆ ನಿರ್ದೇಶಿಸಿಸಿದೆ.

ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರು ತಮಗೆ ಗೊತ್ತಿದ್ದವರಿಗೆ ಔಷಧ ವಿತರಿಸುತ್ತಿರಬಹುದು ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿತು. ಇದೇ ಸಂದರ್ಭದಲ್ಲಿ ಆಪ್‌ ಶಾಸಕರಾದ ಪ್ರೀತಿ ತೋಮರ್‌ ಮತ್ತು ಪ್ರವೀಣ್‌ ಕುಮಾರ್ ಅವರು ವೈದ್ಯಕೀಯ ಆಮ್ಲಜನಕ ದಾಸ್ತಾನು ಮಾಡಿದ್ದರು ಎಂಬ ಆರೋಪ ಕುರಿತಂತೆ ತನಿಖೆ ನಡೆಸಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ದೆಹಲಿ ಸರ್ಕಾರದ ಔಷಧ ನಿಯಂತ್ರಕರಿಗೆ ಸೂಚನೆ ನೀಡಿತು.

ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ, ಕೊರತೆ ಇರುವ ಫಬಿಫ್ಲು ಔಷಧದ 2000 ಕ್ಕೂ ಅಧಿಕ ಸ್ಟ್ರಿಪ್‌ಗಳನ್ನು ಕೆಲವರೇ ಹೇಗೆ ಖರೀದಿಸುವುದು ಸಾಧ್ಯ ಎಂದು ಪರಿಶೀಲಿಸಲು ಸೂಚಿಸಿತು.

ADVERTISEMENT

ಗೌತಮ್‌ ಗಂಭೀರ್‌ ಅವರು ಒಳ್ಳೆಯ ಉದ್ದೇಶದಿಂದಲೇ ಔಷಧಗಳನ್ನು ಸಂಗ್ರಹಿಸಿರಬಹುದು. ಅವರ ಉದ್ದೇಶ ಕುರಿತಂತೆ ನಮಗೆ ಶಂಕೆ ಇಲ್ಲ. ಅವರು ದೇಶದ ರಾಷ್ಟ್ರೀಯ ಆಟಗಾರರಾಗಿದ್ದವರು. ನಮ್ಮ ಪ್ರಶ್ನೆ ಏನೆಂದರೆ ಕೊರತೆ ಇರುವಾಗ ಅವರ ನಡವಳಿಕೆ ಜವಾಬ್ದಾರಿಯುತವಾದುದೇ ಎಂಬುದು ಎಂದು ಪೀಠ ಹೇಳಿತು.

ಒಂದು ಕಡೆ ರೋಗಿಗಳು ಔಷಧ ಖರೀದಿಸಲು ಪರಿತಪಿಸುತ್ತಿದ್ದರೆ, ಇನ್ನೊಂದೆಡೆ ರಾಜಕಾರಣಿಗಳು ದೊಡ್ಡ ಪ್ರಮಾಣದಲ್ಲಿ ಔಷಧ ಖರೀದಿಸುತ್ತಿದ್ದಾರೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.