ADVERTISEMENT

ಕೇರಳ: ಹಾಲಿ ವಿಧಾನಸಭೆಯ ಅವಧಿಯಲ್ಲೇ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆಗೆ ಆದೇಶ

ಪಿಟಿಐ
Published 12 ಏಪ್ರಿಲ್ 2021, 12:05 IST
Last Updated 12 ಏಪ್ರಿಲ್ 2021, 12:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ರಾಜ್ಯಸಭೆಯ ಮೂರು ಸ್ಥಾನಗಳಿಗೆಕೇರಳ ವಿಧಾನಸಭೆಯಿಂದ ನಡೆಯಬೇಕಿರುವ ದ್ವೈವಾರ್ಷಿಕ ಚುನಾವಣೆಯನ್ನು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವ ಮುನ್ನವೇ ನಡೆಸಬೇಕು ಎಂದು ಕೇರಳ ಹೈಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

ತೆರವಾಗುವ ಸ್ಥಾನಗಳು ಆದಷ್ಟು ಶೀಘ್ರ ಭರ್ತಿ ಆಗಬೇಕು. ಆಯೋಗವು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದರು.

ಶೀಘ್ರ ಈ ಸ್ಥಾನಗಳನ್ನು ಭರ್ತಿ ಮಾಡುವುದು ನಮ್ಮ ಹೊಣೆ ಎಂದು ಆಯೋಗವೇ ಒಪ್ಪಿಕೊಂಡಿದೆ. ಹೀಗಾಗಿ, ಇನ್ನಷ್ಟು ವಿಳಂಬವಾಗದಂತೆ ಕ್ರಮವಹಿಸಬೇಕು. ಹೊಸ ಚುನಾಯಿತ ಪ್ರತಿನಿಧಿಗಳು ಬರುವ ಮೇ 2, 2021ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ.ಆಶಾ ಆದೇಶದಲ್ಲಿ ತಿಳಿಸಿದರು.

ADVERTISEMENT

ಉದ್ದೇಶಿತ ಚುನಾವಣೆ ಪ್ರಕ್ರಿಯೆಯನ್ನು ಯಥಾಸ್ಥಿತಿಯಲ್ಲಿಡುವ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ ರಾಜ್ಯ ವಿಧಾನಸಭೆ ಮತ್ತು ಆಡಳಿತರೂಡ ಸಿಪಿಎಂ ಅರ್ಜಿ ಸಲ್ಲಿಸಿದ್ದವು.

ಹೈಕೋರ್ಟ್‌ಗೆ ಈ ಸಂಬಂಧ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಚುನಾವಣೆ ಕುರಿತಂತೆ ಯಾವುದೇ ದಿನಾಂಕವನ್ನು ಆಯೋಗ ನಮೂದಿಸಿಲ್ಲ. ಅಬ್ದುಲ್‌ ವಹಾಬ್‌ (ಐಯುಎಂಎಲ್‌), ಕೆ.ಕೆ.ರಾಗೇಶ್‌ (ಸಿಪಿಎಂ), ವಯಲಾರ್ ರವಿ (ಕಾಂಗ್ರೆಸ್‌) ಅವರು ಏಪ್ರಿಲ್‌ 21ರಂದು ನಿವೃತ್ತರಾಗುತ್ತಿದ್ದು, ತೆರವಾಗುವ ಸ್ಥಾನಗಳಿಗೆ ಚುನಾವಣೆ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.