ಚೆನ್ನೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರಿಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಏಪ್ರಿಲ್ 17ರವರೆಗೆ ಮದ್ರಾಸ್ ಹೈಕೋರ್ಟ್ ವಿಸ್ತರಿಸಿದೆ.
ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸುಂದರ್ ಮೋಹನ್ ಅವರು, ‘ಕಾಮ್ರಾ ಅವರು ಸಂಬಂಧಪಟ್ಟ ಕೋರ್ಟ್ ಮೊರೆ ಹೋಗಲು ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದರು.
‘ಕಾಮ್ರಾ ಅವರ ವಿರುದ್ಧ ಮತ್ತೆ ಮೂರು ಎಫ್ಐಆರ್ಗಳು ದಾಖಲಾಗಿವೆ. ಮುಂಬೈನಲ್ಲಿರುವ ಕಾಮ್ರಾ ಅವರ ಪೋಷಕರ ನಿವಾಸಕ್ಕೆ ಅಧಿಕಾರಿಗಳೂ ಭೇಟಿ ನೀಡಿ, ವಯಸ್ಸಾದ ಪೋಷಕರಿಗೆ ತೊಂದರೆ ನೀಡಿದ್ದಾರೆ. ಈ ಮೂಲಕ ಕಾಮ್ರಾ ಅವರ ಮೇಲಿನ ದ್ವೇಷ ಮುಂದುವರಿದಿದೆ’ ಎಂದು ಕಾಮ್ರಾ ಪರ ವಕೀಲ ವಿ.ಸುರೇಶ್ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಏಪ್ರಿಲ್ 17ಕ್ಕೆ ಮುಂದೂಡಿದ್ದಾರೆ.
ಶಿಂದೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ನೀಡಿದ ದೂರಿನ ಮೇರೆಗೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಕಾಮ್ರಾ ವಿರುದ್ಧ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಾಮ್ರಾಗೆ ಎರಡು ಸಲ ಸಮನ್ಸ್ ನೀಡಿದ್ದರು.
‘ನಾನು 2021ರಲ್ಲೇ ಮುಂಬೈನಿಂದ ತಮಿಳುನಾಡಿಗೆ ವಾಸ ಬದಲಿಸಿದ್ದು, ಅಂದಿನಿಂದ ಈ ರಾಜ್ಯದ ನಿವಾಸಿ ಆಗಿದ್ದೇನೆ. ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿದ್ದೇನೆ’ ಎಂದು ಹೇಳಿ ಕಾಮ್ರಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಮದ್ರಾಸ್ ಹೈಕೋರ್ಟ್ ಶುಕ್ರವಾರ(ಮಾರ್ಚ್ 28) ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.