ADVERTISEMENT

ವಿಮಾನಗಳಲ್ಲಿ ಮಧ್ಯದ ಸೀಟು ಖಾಲಿ ಬಿಡಬೇಕಾಗಿಲ್ಲ: ಬಾಂಬೆ ಹೈಕೋರ್ಟ್‌ ಆದೇಶ

ಪಿಟಿಐ
Published 15 ಜೂನ್ 2020, 12:50 IST
Last Updated 15 ಜೂನ್ 2020, 12:50 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ವಿಮಾನಗಳಲ್ಲಿ ಮಧ್ಯದ ಸೀಟುಗಳನ್ನು ಖಾಲಿ ಬಿಡಬೇಕಾಗಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಆದರೆ, ಕೋವಿಡ್‌ ತಡೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ.

ಮಾರ್ಚ್‌ 23ರಂದು ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಏರ್‌ ಇಂಡಿಯಾ ಪಾಲಿಸುತ್ತಿಲ್ಲ ಎಂದು ಕನಾನಿ ಆರೋಪಿಸಿ, ಏರ್‌ ಇಂಡಿಯಾ ಪೈಲೆಟ್‌ ದೆವೆನ್‌ ಕನಾನಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಸ್‌.ಜೆ ಕತ್ವಾಲ ಮತ್ತು ಎಸ್‌.ಪಿ. ತಾವಡೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಏರ್‌ ಇಂಡಿಯಾವುಕನಾನಿ ಅವರ ಆರೋಪವನ್ನು ಅಲ್ಲಗಳೆದಿದೆ. ಕಳೆದ ತಿಂಗಳಲ್ಲಿ ಡಿಜಿಸಿಎ ನೀಡಿರುವ ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.

ADVERTISEMENT

ಮೇ 31ರಂದು ಡಿಜಿಸಿಎ ಹೊರಡಿಸಿದ್ದ ಸುತ್ತೋಲೆಯಲ್ಲಿ, ಮಧ್ಯದ ಸೀಟುಗಳನ್ನು ಖಾಲಿ ಬಿಡಬೇಕು. ಒಂದು ವೇಳೆ ಪ್ರಯಾಣಿಕರು ಮಧ್ಯದ ಸೀಟುಗಳನ್ನು ಕಾಯ್ದಿರಿಸಿದ್ದರೆ, ಅಂಥವರಿಗೆ ಜವಳಿ ಸಚಿವಾಲಯವು ಶಿಫಾರಸು ಮಾಡಿರುವ ಗೌನ್‌ಗಳನ್ನು ನೀಡಬೇಕು ಎಂದು ಹೇಳಿತ್ತು.

ಕೋರ್ಟ್‌ ಅಭಿಪ್ರಾಯ

* ಮಾರ್ಚ್‌ 23ರಂದು ಡಿಜಿಸಿಎ ನೀಡಿರುವ ಯಾವುದೇ ಮಾರ್ಗಸೂಚಿಯನ್ನೂ ಏರ್‌ ಇಂಡಿಯಾ ಆಗಲಿ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಆಗಲಿ ಉಲ್ಲಂಘನೆ ಮಾಡಿರುವುದು ಕಂಡುಬಂದಿಲ್ಲ

* ವಿಮಾನದಲ್ಲಿ ಸೋಂಕು ತಗುಲಿರುವ ಯಾವುದೇ ಪ್ರಕರಣ ಇಲ್ಲಿಯವರೆಗೆ ದಾಖಲಾಗಿಲ್ಲ. ವಿಮಾನದಿಂದ ಇಳಿಯುವಾಗಲು ಸಹ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿದೆ.

* ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆ ಕುರಿತಂತೆ ವಿಮಾನಯಾನ ಸಂಸ್ಥೆಗಳು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

* ಒಂದು ವೇಳೆ ಮಧ್ಯದ ಸೀಟು ಖಾಲಿ ಇದ್ದರೂ, ಕಿಟಕಿ ಬಳಿ ಸೀಟಿನಲ್ಲಿ ಕೂತಿರುವ ವ್ಯಕ್ತಿ, ಶೌಚಾಲಯಕ್ಕೆ ಹೋಗುವ ಮತ್ತು ವಾಪಸ್‌ ಬರುವ ಸಂದರ್ಭದಲ್ಲಿ ಮತ್ತೊಂದು ವ್ಯಕ್ತಿಯನ್ನು ತಾಗಿಸಿಕೊಂಡೇ ಹೋಗಬೇಕಾಗುತ್ತದೆ. ಆದ್ದರಿಂದ ಮಧ್ಯದ ಸೀಟು ಖಾಲಿ ಬಿಡುವ ಅಗತ್ಯ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.