ನವದೆಹಲಿ: ಸೇನಾ ಸಿಬ್ಬಂದಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಅವಕಾಶ ನೀಡಿದರೆ ಶತ್ರು ರಾಷ್ಟ್ರಗಳಿಗೆ ಸಹಕಾರಿಯಾಗಲಿದೆ ಎನ್ನುವ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದರೆ, ಈ ನಿರ್ಧಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ತಿಳಿಸಿದೆ.
89 ಸಾಮಾಜಿಕ ಜಾಲತಾಣಗಳನ್ನು ಸೇನಾ ಸಿಬ್ಬಂದಿ ಬಳಸಬಾರದು ಎಂದು ಸೂಚಿಸಿಭಾರತೀಯ ಸೇನೆಯು ಜೂನ್ 6ರಂದು ಹೊಸ ನೀತಿ ರೂಪಿಸಿತ್ತು. ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಉಳಿದೆಲ್ಲ ಜಾಲತಾಣಗಳಲ್ಲಿ ಇದ್ದ ತಮ್ಮ ಖಾತೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು.
ಇದನ್ನು ಪ್ರಶ್ನಿಸಿಹಿರಿಯ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹಾಯಿ ಮತ್ತು ಆಶಾ ಮೆನನ್ ಅವರಿದ್ದ ನ್ಯಾಯಪೀಠವು, ‘ಪ್ರಸ್ತುತ ಯುದ್ಧವೆಂದರೆ, ಪ್ರದೇಶದ ಸ್ವಾಧೀನವಷ್ಟೇ ಅಲ್ಲ. ಒಂದು ರಾಷ್ಟ್ರದ ಆರ್ಥಿಕತೆ ಮೇಲೆ ದಾಳಿ, ದೇಶದೊಳಗೇ ಗಲಭೆ ಸೃಷ್ಟಿಸುವುದೂ ಶತ್ರು ರಾಷ್ಟ್ರಗಳ ಯುದ್ಧದ ಭಾಗವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ನಂತರದಲ್ಲಿ ಅರ್ಜಿಯನ್ನು ವಜಾಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.