ADVERTISEMENT

ಶ್ರೀ ಕೃಷ್ಣ ಜನ್ಮಭೂಮಿ ವಿವಾದ: ಕೆಳಹಂತದ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆ

ಪಿಟಿಐ
Published 4 ಆಗಸ್ಟ್ 2022, 2:23 IST
Last Updated 4 ಆಗಸ್ಟ್ 2022, 2:23 IST
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಮತ್ತು ಶಾಹೀ ಈದ್ಗಾ ಮಸೀದಿ (ಪಿಟಿಐ ಚಿತ್ರ)
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಮತ್ತು ಶಾಹೀ ಈದ್ಗಾ ಮಸೀದಿ (ಪಿಟಿಐ ಚಿತ್ರ)   

ಪ್ರಯಾಗರಾಜ್‌: ಮಥುರಾದ ಶಾಹೀ ಈದ್ಗಾ ಮಸೀದಿ ಟ್ರಸ್ಟ್ ಸ್ವಾಧೀನದಲ್ಲಿದೆ ಎಂದು ಹೇಳಲಾಗುತ್ತಿರುವ, ಶ್ರೀಕೃಷ್ಣನ ನೈಜ ಜನ್ಮಸ್ಥಳದಲ್ಲಿ ಭಕ್ತರು ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆಯೊಳಗಾಗಿ ಪ್ರತಿವಾದಿಗಳು ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಾಲಯವು ಸೂಚಿಸಿತು. ವಿಚಾರಣೆಯನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಮುಂದಿನ ದಿನಗಳಲ್ಲಿ ನಿಗದಿಪಡಿಸಲಿದ್ದಾರೆ ಎಂದು ಕೋರ್ಟ್‌ ಹೇಳಿತು.

ಮೇ 19, 2022 ರಂದು ಮಥುರಾ ಜಿಲ್ಲಾ ನ್ಯಾಯಾಧೀಶರು ನೀಡಿದ ತೀರ್ಪು ಮತ್ತು ಆದೇಶವನ್ನು ಪ್ರಶ್ನಿಸಿ ‘ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಲೀಲ್ ಕುಮಾರ್ ರೈ ಈ ಆದೇಶವನ್ನು ನೀಡಿದ್ದಾರೆ.

ADVERTISEMENT

ಪೂಜೆಗೆ ಅವಕಾಶ ಕೋರಿದ್ದ ಅರ್ಜಿಯ ವಿಚಾರಣೆ ನಡೆಸುವಂತೆಯು, ಸೂಕ್ತ ಆದೇಶ ನೀಡುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ಮಥುರಾ ಜಿಲ್ಲಾ ನ್ಯಾಯಾಧೀಶರು ಮೇ 19ರಂದು ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.