ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ 'ಆರೋಗ್ಯ ಮೂಲಸೌಕರ್ಯ'ಕ್ಕೆ ಭಾರಿ ಉತ್ತೇಜನ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಸೋಮವಾರ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್ ರೋಗಿಗಳು ಮತ್ತು ಆರೈಕೆದಾರರಿಗಾಗಿ ನಿರ್ಮಾಣವಾಗುತ್ತಿರುವ 'ಸ್ವಸ್ತಿ ನಿವಾಸ' ವಸತಿ ಸಮುಚ್ಚಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾನ್ಸರ್ ಪೀಡಿತರ ಕಷ್ಟವು ಹೇಳಿಕೊಳ್ಳಲು ಅಸಾಧ್ಯ, ಇದರಿಂದ ಅವರ ಕುಟುಂಬವು ಕೂಡ ಸಂಕಷ್ಟವನ್ನು ಅನುಭವಿಸುವಂತಾಗುತ್ತದೆ. ಅವರ ಕಣ್ಣೀರು ಒರೆಸುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂದರು.
ಮೋದಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ವಲಯಕ್ಕಾಗಿ ಬಜೆಟ್ನಲ್ಲಿ ₹1.35 ಲಕ್ಷಕೋಟಿ ಮೀಸಲಿಡಲಾಗಿದೆ. 60 ಕೋಟಿ ಬಡ ಜನರು ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ನಂತರದಿಂದ ದೇಶದಲ್ಲಿ ಕೇವಲ 7 ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗಳಿದ್ದವು. ಇದೀಗ ಆ ಸಂಖ್ಯೆ 23ಕ್ಕೆ ಏರಿದೆ ಎಂದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೂಡ ಸರ್ಕಾರದ ಜನಪರ ಯೋಜನೆಗಳ ಜೊತೆಗೆ ಕೈ ಜೋಡಿಸಿರುವುದರಿಂದ ಆರೋಗ್ಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.