ADVERTISEMENT

ಎಂಜಿನಿಯರಿಂಗ್ ಬಿಟ್ಟು ರಾಜಕಾರಣಕ್ಕೆ ಬಂದಿದ್ದ ಹೇಮಂತ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 9:51 IST
Last Updated 24 ಡಿಸೆಂಬರ್ 2019, 9:51 IST
ಹೇಮಂತ್ ಸೊರೆನ್
ಹೇಮಂತ್ ಸೊರೆನ್   

ರಾಂಚಿ: ಜಾರ್ಖಾಂಡ್‌ನ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೇಮಂತ್ ಸೊರೆನ್, ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ.

ಸುಮಾರು 20 ವರ್ಷಗಳಷ್ಟು ಹಿಂದೆ, ಆಗಷ್ಟೇ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಹೇಮಂತ್ ಸೊರೆನ್ ಎದುರು ಎರಡು ಆಯ್ಕೆಗಳಿದ್ದವು. ಪ್ರತ್ಯೇಕ ಜಾರ್ಖಂಡ್‌ ರಾಜ್ಯಕ್ಕಾಗಿ ಹೋರಾಡುತ್ತಿದ್ದ ತಮ್ಮ ತಂದೆ ಶಿಬು ಸೊರೆನ್ ಜತೆ ರಾಜಕೀಯಕ್ಕೆ ಇಳಿಯುವುದು ಮೊದಲ ಆಯ್ಕೆಯಾಗಿತ್ತು. ರಾಂಚಿಯ ಬಿರ್ಲಾ ತಾಂತ್ರಿಕ ವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರುವುದು ಎರಡನೇ ಆಯ್ಕೆಯಾಗಿತ್ತು. ಆದರೆ ಆಯ್ಕೆಯ ಸ್ವಾತಂತ್ರ್ಯ ಅವರಿಗಿರಲಿಲ್ಲ.

ಶಿಬು ಮತ್ತು ರಿಪುಸೊರೆನ್ ದಂಪತಿಯ ಮೊದಲ ಮಗ ದುರ್ಗಾ ಸೊರೆನ್ ಅವರು, ಅವಿಭಜಿತ ಬಿಹಾರದಲ್ಲಿ ಶಾಸಕರಾಗಿದ್ದರು. ಹೀಗಾಗಿ ಹೇಮಂತ್ ಎಂಜಿನಿಯರಿಂಗ್ ಆಗಬೇಕು ಎಂಬುದು ಸೊರೆನ್ ದಂಪತಿಯ ಆಯ್ಕೆಯಾಗಿತ್ತು. ಆದರೆ, ಎಂಜಿನಿಯರಿಂಗ್ ಪದವಿಗೆ ಸೇರಿದರೂ ಅದನ್ನು ಹೇಮಂತ್ ಪೂರ್ಣಗೊಳಿಸಲು ಆಗಲಿಲ್ಲ.

ADVERTISEMENT

2005ರಲ್ಲಿ ಅವರು ದುಮಕಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು, ಸೋಲಿನ ರುಚಿ ಕಂಡರು. ಅಧಿಕಾರದ ರಾಜಕಾರಣದಿಂದ ದೂರ ಉಳಿದರು ಎನ್ನುವಷ್ಟರಲ್ಲೇ 2009ರ ಮೇನಲ್ಲಿ ಸೋದರ ದುರ್ಗಾ ಸೊರೆನ್ ಮೃತಪಟ್ಟರು. ಈ ಸಾವು, ಹೇಮಂತ್ ಅವರು ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದಲ್ಲಿ ಪ್ರಮುಖ ಸ್ಥಾನಕ್ಕೆ ಬರಲು ನೆರವಾಯಿತು. 2009ರಜೂನ್‌ನಲ್ಲಿ ರಾಜ್ಯಸಭೆ ಸದಸ್ಯರಾಗುವ ಯೋಗ ಹೇಮಂತ್‌ಗೆ ಒದಗಿತು. ಆದರೆ, ಈ ಹುದ್ದೆಯಲ್ಲೂ ಅವರು ಹೆಚ್ಚು ದಿನ ಮುಂದುವರಿಯಲಿಲ್ಲ. 2009ರ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ದುಮಕಾ ಶಾಸಕರಾಗಿ ಆಯ್ಕೆಯಾದರು.

ಬಿಜೆಪಿಗೆ ಜೆಎಂಎಂ ಬೆಂಬಲ ನೀಡಿದ್ದರಿಂದ ಜಾರ್ಖಂಡ್‌ನ ಉಪಮುಖ್ಯಮಂತ್ರಿಯಾಗುವ ಅವಕಾಶ ಹೇಮಂತ್‌ಗೆ ಒದಗಿ ಬಂತು. 2013ರಲ್ಲಿ ಜೆಎಂಎಂ ಬೆಂಬಲ ವಾಪಸ್ ಪಡೆದ ಕಾರಣ ಸರ್ಕಾರ ಉರುಳಿತು. ಜೆಎಂಎಂಗೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬೆಂಬಲ ನೀಡಿದವು. 2013ರ ಜುಲೈನಲ್ಲಿ ಹೇಮಂತ್ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂತು.

ಈ ಚುನಾವಣೆಗೂ ಮುನ್ನ ಮಹಾಘಟಬಂಧನ ರಚಿಸುವ ಪ್ರಸ್ತಾವಕ್ಕೆ ನೀರೆರದಿದ್ದು ಸ್ವತಃ ಹೇಮಂತ್. ಹೀಗಾಗಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಕಾಂಗ್ರೆಸ್ ಮತ್ತು ಆರ್‌ಜೆಡಿ ಒಪ್ಪಿದವು.

ರಾಜ್ಯದ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಮಹಾಘಟಬಂಧನದ ನಾಯಕರು ನಡೆಸಿದ ಅಭಿಯಾನಗಳು ಚುನಾವಣೆಯಲ್ಲಿ ಫಲಕೊಟ್ಟಿವೆ.ಈಗ ಮತ್ತೆ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿಯು ಅಧಿಕಾರಕ್ಕೆ ಬರುವ ಹಾದಿಯಲ್ಲಿದೆ. ಹೇಮಂತ್ ಸೊರೆನ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.