ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದೆ. ಈ ಮಧ್ಯೆ ಸರ್ಕಾರ ದೇಗುಲದ ಹೊರ ರಚನೆಯ ನೀಲನಕ್ಷೆ ಬಿಡುಗಡೆ ಮಾಡಿದೆ.ಗೋಪುರಗಳು, ಕಂಬಗಳು ಮತ್ತು ಗುಮ್ಮಟಗಳನ್ನು ಒಳಗೊಂಡ ಮೂರು ಅಂತಸ್ತಿನ ಭವ್ಯವಾದ ರಚನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯದ ಯೋಜನೆಯ ಪ್ರಕಾರ ದೇಗುಲವು ಈ ಮೊದಲು ರೂಪಿಸಿದ್ದಕ್ಕಿಂತಲೂ ಎರಡು ಪಟ್ಟು ದೊಡ್ಡದಾಗುವ ಸಾದ್ಯತೆಗಳಿವೆ. ಭೂ ವ್ಯಾಜ್ಯ ಪ್ರಕರಣದಲ್ಲಿ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ ಎನ್ಡಿಟಿವಿ ವರದಿ ಮಾಡಿದೆ.ದೇವಾಲಯವನ್ನು ನಗರಾ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದೆ. ಹೆಚ್ಚಿನ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಎರಡು ಗುಮ್ಮಟಗಳ ಬದಲಿಗೆ ಈಗ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ.