ADVERTISEMENT

ಹರಿಯಾಣ | ಸಾವಿಗೂ ಮುನ್ನ ಆರೋಪಿಗಳ ವಾಹನ ಸಂಖ್ಯೆ ಅಂಗೈಯಲ್ಲಿ ಬರೆದ ಪೊಲೀಸ್‌

ಹರಿಯಾಣ ಪೊಲೀಸ್‌ ಸಿಬ್ಬಂದಿ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 16:16 IST
Last Updated 7 ಜುಲೈ 2020, 16:16 IST
ಅಂಗೈನಲ್ಲಿ ಬರೆದಿರುವುದು
ಅಂಗೈನಲ್ಲಿ ಬರೆದಿರುವುದು    

ಚಂಡೀಗಡ: ತನ್ನನ್ನು ಹತ್ಯೆ ಮಾಡಿದ ಆರೋಪಿಗಳ ವಾಹನ ಸಂಖ್ಯೆಯನ್ನು ಹರಿಯಾಣದ ಪೊಲೀಸ್‌ ಸಿಬ್ಬಂದಿಯೊಬ್ಬರು, ಸಾಯುವ ಮುನ್ನ ತನ್ನ ಅಂಗೈಯಲ್ಲೇ ಬರೆದಿಟ್ಟು, ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ಮಂಗಳವಾರ ಸೋನಿಪತ್‌ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಸಿಂಗ್‌ ಹಾಗೂ 43 ವರ್ಷದ ವಿಶೇಷ ಪೊಲೀಸ್‌ ಅಧಿಕಾರಿ ಕಪ್ತಾನ್‌ ಸಿಂಗ್‌ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು.ಇಬ್ಬರು ಪೊಲೀಸ್‌ ಸಿಬ್ಬಂದಿ ಹತ್ಯೆ ಪ್ರಕರಣದಲ್ಲಿ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಜಿಂದ್‌ ಜಿಲ್ಲೆಯಲ್ಲಿ ಪೊಲೀಸರ ಗುಂಡಿಗೆ ಸಾವನ್ನಪಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹತ್ಯೆಯಾದ ಪೊಲೀಸ್‌ ಸಿಬ್ಬಂದಿ ಪೈಕಿ 28 ವರ್ಷದ ರವೀಂದರ್‌ ಸಿಂಗ್‌, ಸಾವಿಗೂ ಮುನ್ನ ತಮ್ಮ ಅಂಗೈಯಲ್ಲಿ ಆರೋಪಿಗಳ ವಾಹನ ಸಂಖ್ಯೆಯಲ್ಲಿ ಬರೆದಿದ್ದರು. ಈ ಸಂಖ್ಯೆಯನ್ನೇ ಬಳಸಿಕೊಂಡು ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು.

ADVERTISEMENT

‘ಮೃತದೇಹದ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಸಿಂಗ್‌ ಅಂಗೈಯಲ್ಲಿದ್ದ ಸಂಖ್ಯೆ ಬೆಳಕಿಗೆ ಬಂದಿತ್ತು. ಮರಣೋತ್ತರಪೊಲೀಸ್‌ ಪದಕಕ್ಕೆ ರವೀಂದರ್‌ ಸಿಂಗ್‌ ಅವರ ಹೆಸರನ್ನು ಶಿಫಾರಸು ಮಾಡಲಾಗುವುದು’ ಎಂದು ಹರಿಯಾಣ ಪೊಲೀಸ್‌ ಮುಖ್ಯಸ್ಥ ಮನೋಜ್‌ ಯಾದವ್‌ ತಿಳಿಸಿದರು.

ಘಟನೆ ವಿವರ: ಸೋನಿಪತ್‌–ಜಿಂದ್‌ ರಸ್ತೆಯಲ್ಲಿ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಆರೋಪಿಗಳನ್ನು ರವೀಂದರ್‌ ಸಿಂಗ್‌ ಹಾಗೂ ಕಪ್ತಾನ್‌ ಸಿಂಗ್‌ ತಡೆದಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಆರೋಪಿಗಳು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ, ಜಿಂದ್‌ ಕಡೆಗೆ ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.