ADVERTISEMENT

G-20 Summit | ಹವಾಮಾನ, ಇಂಧನ ಕ್ಷೇತ್ರದ ಸವಾಲುಗಳ ಬಗ್ಗೆ ಒಮ್ಮತ: ಭಾರತ ವಿಶ್ವಾಸ

ಪಿಟಿಐ
Published 7 ಸೆಪ್ಟೆಂಬರ್ 2023, 13:22 IST
Last Updated 7 ಸೆಪ್ಟೆಂಬರ್ 2023, 13:22 IST
-
-   

ನವದೆಹಲಿ: ಜಿ–20 ಶೃಂಗಸಭೆಗೆ ದಿನಗಣನೆ ಆರಂಭವಾಗಿದೆ. ಹವಾಮಾನ ಬದಲಾವಣೆ, ಇಂಧನ ಕ್ಷೇತ್ರ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಸಂಘಟನೆಯ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ಆಶಾಭಾವ ಹೊಂದಿದೆ.

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ನಲ್ಲಿ (ಎಂಡಿಬಿ) ಸುಧಾರಣೆಗಳು, ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಗ್ಗಿಸುವ ಕುರಿತು ಕೈಗೊಳ್ಳುವ ನಿಲುವುಗಳು ಭಾರತದ ನಾಯಕತ್ವಕ್ಕೆ ಮತ್ತಷ್ಟು ಬಲ ತುಂಬಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು ಮತ್ತು ಇಂಧನ ಕುರಿತ ವಿಷಯಗಳು ಸಂಕೀರ್ಣವಾಗಿದ್ದರೂ, ಈ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ವಿಶ್ವ ನಾಯಕರಲ್ಲಿ ಒಮ್ಮತ ಮೂಡಲಿದೆ ಎಂಬ ವಿಶ್ವಾಸವನ್ನು ಭಾರತ ಹೊಂದಿದೆ.

ADVERTISEMENT

ಇತ್ತೀಚೆಗೆ ನಡೆದಿದ್ದ ಜಿ–20 ಇಂಧನ ಸಚಿವರ ಸಭೆಯಲ್ಲಿ ಸೌದಿ ಅರೇಬಿಯಾ ಮತ್ತಿತರ ತೈಲ ಉತ್ಪಾದಿಸುವ ರಾಷ್ಟ್ರಗಳು ಪಳೆಯುಳಿಕೆ ಇಂಧನ ಬಳಕೆಯನ್ನು ತಗ್ಗಿಸುವ ಯತ್ನಗಳಿಗೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಜಿ–7 ಗುಂಪಿನ ರಾಷ್ಟ್ರಗಳು ಈ ಕಾರ್ಯಕ್ಕೆ ವೇಗ ನೀಡುವುದಕ್ಕೆ ಸಮ್ಮತಿ ಸೂಚಿಸಿವೆ.

ಜಗತ್ತಿನ ಒಟ್ಟು ಜಿಡಿಪಿಯಲ್ಲಿ ಜಿ–20 ರಾಷ್ಟ್ರಗಳ ಪಾಲು ಶೇ 85ರಷ್ಟಿದೆ. ಉಷ್ಣವರ್ಧಕ ಅನಿಲಗಳ ಹೊರಸೂಸುವಿಕೆಯಲ್ಲಿ ಈ ದೇಶಗಳ ಪಾಲು ಶೇ 80ರಷ್ಟು. ಹೀಗಾಗಿ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಗ್ಗಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆಯನ್ನು 2030ರ ವೇಳೆಗೆ ಮೂರು ಪಟ್ಟು ಹೆಚ್ಚಿಸಬೇಕು ಎಂಬ ವಿಷಯ ಕುರಿತಂತೆಯೂ ಜಿ–20 ರಾಷ್ಟ್ರಗಳು ಒಮ್ಮತಕ್ಕೆ ಬರಲು ವಿಫಲವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.