ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಸಹಯೋಗದಲ್ಲಿ ನಡೆಯುತ್ತಿರುವಶಾಲೆಯೊಂದರ ಶಿಕ್ಷಕಿಯರಿಗೆ 'ಹಿಜಾಬ್' ಧರಿಸದಂತೆ ತಾಕೀತು ಮಾಡಿದ ವಿಚಾರಕ್ಕೆ ಸಂಬಂಧಿಸಿ, 'ಬೇರೆ ರಾಜ್ಯಗಳಲ್ಲಿ ಬುಲ್ಡೋಜರ್ ಬಳಸಿ ಅಲ್ಪಸಂಖ್ಯಾತರ ಮನೆಗಳನ್ನು ಕೆಡವಿದಂತೆ ಹಾಗೂ ಹೆಣ್ಣುಮಕ್ಕಳ ಹಕ್ಕನ್ನು ಕಿತ್ತುಕೊಂಡಂತೆ ಇಲ್ಲಿ ಆಗುವುದಿಲ್ಲ' ಎಂದು ಮಾಜಿ ಸಿಎಂಮೆಹಬೂಬ ಮುಫ್ತಿ ಹೇಳಿದ್ದಾರೆ.
'ಹಿಜಾಬ್ ಧರಿಸದಂತೆ ಆದೇಶಿಸಿದ ನಡೆಯನ್ನು ವಿರೋಧಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಆಳುತ್ತಿರಬಹುದು. ಆದರೆ ಇದು ಖಂಡಿತವಾಗಿಯೂ ಬುಲ್ಡೋಜರ್ಗಳ ಮೂಲಕ ಅಲ್ಪಸಂಖ್ಯಾತರ ಮನೆಗಳನ್ನು ಕೆಡವುತ್ತಿರುವ ಮತ್ತು ಅವರಿಷ್ಟದಂತೆ ಬಟ್ಟೆ ಧರಿಸುವ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವ ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಂತಲ್ಲ. ನಮ್ಮ ಹೆಣ್ಣುಮಕ್ಕಳು ತಮ್ಮ ವಸ್ತ್ರ ಆಯ್ಕೆಯ ಹಕ್ಕನ್ನು ಬಿಟ್ಟುಕೊಡುವುದಿಲ್ಲ' ಎಂದು ಮಾಜಿ ಸಿಎಂ ಮೆಹಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲ ನಗರದಲ್ಲಿ ಭಾರತೀಯ ಸೇನೆಯ ಸಹಯೋಗದೊಂದಿಗೆ ಸ್ವಯಂಸೇವಾ ಸಂಸ್ಥೆಯೊಂದು ನಡೆಸುತ್ತಿರುವ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯರಿಗೆ ಹಿಜಾಬ್ ಧರಿಸದಂತೆ ಆಡಳಿತ ಮಂಡಳಿ ತಾಕೀತು ಮಾಡಿತ್ತು.ಶಾಲಾ ಆಡಳಿತ ಮಂಡಳಿಯ ನಡೆಯು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಬುಧವಾರ ಸುತ್ತೋಲೆಯನ್ನು ತಿದ್ದುಪಡಿ ಮಾಡಿ ಪ್ರಕಟಿಸಿದೆ. ಹಿಜಾಬ್ ಪದವನ್ನು ತೆಗೆದು, ನಕಾಬ್ (ಮುಖಪರದೆ) ಪದವನ್ನು ಬಳಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.