ADVERTISEMENT

ಭಾರತೀಯ ಮಹಿಳೆಯರ ಯಶೋಗಾಥೆ ನೆನಪಿಸಿಕೊಂಡ ಹಿಲರಿ ಕ್ಲಿಂಟನ್

ಬಡ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ ‘ಸೇವಾ’ ಸಂಸ್ಥೆ: ಹಿಲರಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 2:10 IST
Last Updated 16 ಡಿಸೆಂಬರ್ 2018, 2:10 IST
   

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆಗೆಂದು ಭಾರತಕ್ಕೆ ಬಂದಿದ್ದ ಅಮೆರಿಕ ಮಾಜಿ ವಿದೇಶಾಂಗ ಖಾತೆ ಕಾರ್ಯದರ್ಶಿಹಿಲರಿ ಕ್ಲಿಂಟನ್ 1995ರಲ್ಲಿ ತಾವು ಭೇಟಿಯಾದ ಸಾಧಕಿಯೊಬ್ಬರನ್ನು ನೆನಪಿಸಿಕೊಂಡುಸ್ಫೂರ್ತಿದಾಯಕ ಕಥನವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಳಾ ಭಟ್ 1972ರಲ್ಲಿ ‘ಸೇವಾ’ (SEWA– Self-Employed Women's Association) ಸಂಸ್ಥೆಯನ್ನು 1972ರಲ್ಲಿ ಆರಂಭಿಸಿದರು. ಈ ಸಂಸ್ಥೆಯು ಈವರೆಗೆ ಬಡ ಮಹಿಳೆಯರಿಗೆ ತರಬೇತಿ ಮತ್ತು ಸಾಲದ ಸೌಲಭ್ಯ ಕಲ್ಪಿಸಿ ಆರ್ಥಿಕ ಸ್ವಾವಲಂಬಿಗಳಾಗಲು ನೆರವು ನೀಡಿದೆ.ಹಿಲರಿ ಕ್ಲಿಂಟನ್ 1995ರಲ್ಲಿ ಅಹಮದಾಬಾದ್‌ನಲ್ಲಿರುವ ‘ಸೇವಾ’ದ ಮುಖ್ಯ ಕಚೇರಿಯಲ್ಲಿ ಭೇಟಿಯಾಗಿದ್ದರು.

ಜೂನ್ 18, 2009ರಲ್ಲಿ‘ಸೇವಾ’ ಸಂಸ್ಥೆಯ ಇಳಾ ಭಟ್ ಅವರನ್ನು ಭೇಟಿಯಾಗಿದ್ದ ಹಿಲರಿ ಕ್ಲಿಂಟನ್

14 ಸಾವಿರ ಸದಸ್ಯರಿರುವ ಈ ಸಂಸ್ಥೆಯು ದೇಶದಲ್ಲಿ ಒಂದು ಚಳವಳಿಯಾಗಿ ಬೆಳೆಯುತ್ತಿದೆ. ಬಹುತೇಕ ಸದಸ್ಯರು ಅತಿಬಡ ಕುಟುಂಬಗಳ ಹಿನ್ನೆಲೆಯಿಂದ ಬಂದಿದ್ದಾರೆ. ಇವರ ಪೈಕಿ ಹಲವರು ಗಂಡನಿಂದ ದೂರವಾಗಿದ್ದಾರೆ, ಕೆಲವರು ಅಂಗವಿಕಲರು.

ADVERTISEMENT

ಸಂಘಟನೆಯು ಮಹಿಳೆಯರಿಗೆ ದುಡ್ಡು ಗಳಿಸುವ ಮಾರ್ಗ ತೋರಿ ಸುಮ್ಮನಾಗಿಲ್ಲ. ವ್ಯಾಪಾರದ ಪಾಠ ಕಲಿಸುವ ಮೂಲಕಆರ್ಥಿಕ ಸ್ವಾವಲಂಬನೆಯ ಮೂಲ ಅಂಶಗಳನ್ನು ಮನದಟ್ಟು ಮಾಡಿಸಿದೆ. ಈ ಸಾಧನೆ ಗುರುತಿಸಿರುವಹಿಲರಿ ಕ್ಲಿಂಟನ್, ‘ಮೈಕ್ರೊಲೋನ್ ಕ್ಷೇತ್ರದಲ್ಲಿ ಇಳಾ ಭಟ್ ಮತ್ತು ಅವರ ‘ಸೇವಾ’ ಸಂಸ್ಥೆ ತಮ್ಮ ಕಾಲಕ್ಕಿಂತ ಮುಂದಿದೆ’ (Ahead of Time) ಎಂದು ಶ್ಲಾಘಿಸಿದ್ದಾರೆ.

ತಮ್ಮೊಡನೆ ಹೇಗೆ ‘ಸೇವಾ’ ಸಂಸ್ಥೆಯ ಸಾವಿರಾರು ಮಹಿಳೆಯರು ತಮ್ಮ ಬದುಕಿನ ಕಥೆಗಳನ್ನು, ಆರ್ಥಿಕ ಸ್ವಾತಂತ್ರ್ಯದ ಅವಕಾಶಗಳನ್ನು ದಕ್ಕಿಸಿಕೊಂಡ ಬಗೆಯನ್ನು ಹಂಚಿಕೊಂಡರು ಎಂಬುದನ್ನು ಹಿಲರಿ ನೆನಪಿಸಿಕೊಂಡಿದ್ದಾರೆ. 2009ರಲ್ಲಿ ಸಂಸ್ಥೆಯ ಸದಸ್ಯರ ಸಂಖ್ಯೆ 10 ಲಕ್ಷ ದಾಟಿತು. ಈಗ (2018ರಲ್ಲಿ) 20 ಲಕ್ಷ ಮೀರಿದೆ. 1995ರಲ್ಲಿ ಮೊದಲ ಬಾರಿಗೆ ಹಿಲರಿ ಅವರನ್ನು ‘ನಾವು ಗೆಲ್ಲಬೇಕು’ ಎನ್ನುವ ಗುಜರಾತಿ ಹಾಡು ಹಾಡಿ ಸ್ವಾಗತಿಸಿದ್ದ ಮಹಿಳೆಯರು ಈ ವರ್ಷವೂ ಮತ್ತೆ ಅದೇ ಹಾಡು ಹಾಡಿ ಮೋಡಿ ಮಾಡಿದರು.

‘23 ವರ್ಷಗಳಿಂದ ನಾನು ಇಳಾ ಭಟ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ತಾವು ಕಟ್ಟಿದ ಸಂಸ್ಥೆ ಹೆಮ್ಮರವಾಗಿ ಬೆಳೆದ ಬಗೆಯನ್ನು ಅವರು ನೋಡಿದ್ದಾರೆ. ‘ಸೇವಾ’ದ ಚಟುವಟಿಕೆಗಳು ನನಗೆ ಹೆಮ್ಮೆ ತಂದಿವೆ’ ಎಂದು ಹಿಲರಿ ಹೇಳಿಕೊಂಡಿದ್ದಾರೆ.

‘ಒಬ್ಬರುಕಾರ್ಖಾನೆಯಲ್ಲಿ ಕೆಲಸ ಮಾಡಬಹುದು, ಮತ್ತೊಬ್ಬರುಮನೆಯಲ್ಲಿ ಇರಬಹುದು, ಮಗದೊಬ್ಬರು ರಸ್ತೆ ಬದಿ ಮಲಗಬಹುದು. ಎಲ್ಲರಿಗೂ ದೇವರು ಕೊಟ್ಟಿರುವ ಪ್ರತಿಭೆ ಬಳಸಿಕೊಳ್ಳಲು,ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಅವಕಾಶ ಸಿಗಬೇಕು. ಸಾಧನೆಯ ವಿಷಯಕ್ಕೆ ಬಂದಾಗಬಡವಅಥವಾಶ್ರೀಮಂತ ಎನ್ನುವುದು ಯಾರಿಗೂ ಒಂದು ಮಿತಿಯಾಗಬಾರದು’ ಎನ್ನುವ ಭಾವುಕ ಸಾಲುಗಳುಹಿಲರಿ ಅವರ ಪೋಸ್ಟ್‌ನಲ್ಲಿ ಗಮನ ಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.