ADVERTISEMENT

ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ಹಿಂದೂ ದಂಪತಿ ಶವಸಂಸ್ಕಾರ

ಭಾವೈಕ್ಯ ಸಂದೇಶ ಸಾರಿದ ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 11:49 IST
Last Updated 15 ಜುಲೈ 2021, 11:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ಹಿಂದೂ ದಂಪತಿಯ ಶವಸಂಸ್ಕಾರ ನೆರವೇರಿಸಲು ಅವಕಾಶ ಮಾಡಿಕೊಡುವ ಮೂಲಕ ಕೇರಳದ ಅಲಪ್ಪುಳ ಜಿಲ್ಲೆಯ ಎಡತ್ವಾ ಗ್ರಾಮದಲ್ಲಿನ ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್ ಭಾವೈಕ್ಯದ ಸಂದೇಶ ಸಾರಿದೆ.

ಎಡತ್ವಾ ಸಮೀಪದ ಮರಿಯಾಪುರಂ ಗ್ರಾಮದ ನಿವಾಸಿಗಳಾದ ಶ್ರೀನಿವಾಸನ್‌ ಹಾಗೂ ಕೃಷ್ಣವೇಣಿ ಅವರ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ವಿಧಿವಿಧಾನಗಳಂತೆಯೇ ನೆರವೇರಿಸಲು ಚರ್ಚ್ ಅನುವು ಮಾಡಿಕೊಟ್ಟಿದೆ.

80 ವರ್ಷದ ಶ್ರೀನಿವಾಸನ್‌ ಅವರು ಕೋವಿಡ್‌ನಿಂದಾಗಿ ಕಳೆದ ತಿಂಗಳು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ನೆರವೇರಿಸಲಾಯಿತು.

ADVERTISEMENT

ಪತ್ನಿ ಕೃಷ್ಣವೇಣಿ ಅವರು ವಯೋಸಹಜ ಕಾಯಿಲೆಗಳಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನೂ ಇದೇ ಸ್ಮಶಾನದಲ್ಲಿ ನೆರವೇರಿಸಲಾಯಿತು.

‘ಈ ದಂಪತಿಗೆ ಸ್ವಂತ ಜಮೀನು ಇರಲಿಲ್ಲ. ಅವರು ವಾಸವಿದ್ದ ಬಾಡಿಗೆ ಜಾಗ, ಪತಿ ಶ್ರೀನಿವಾಸನ್‌ ಮೃತಪಟ್ಟಾಗ ಜಲಾವೃತಗೊಂಡಿತ್ತು. ಈಗ ಪತ್ನಿ ಮೃತಪಟ್ಟಾಗಲೂ ಅದೇ ಪರಿಸ್ಥಿತಿ ಇದ್ದ ಕಾರಣ, ಅಂತ್ಯಕ್ರಿಯೆಗಾಗಿ ಚರ್ಚ್‌ ಆಡಳಿತವನ್ನು ಕೇಳಿಕೊಂಡೆವು. ಅವರು ಒಪ್ಪಿಗೆ ನೀಡಿದರು’ ಎಂದು ಎಡತ್ವಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರಿಯಮ್ಮ ಜಾರ್ಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಮೊದಲ ಬಾರಿಗೆ ಅನ್ಯ ಸಮುದಾಯಕ್ಕೆ ಸೇರಿದವರ ಶವಗಳ ಅಂತ್ಯಕ್ರಿಯೆಯನ್ನು ಚರ್ಚ್‌ನ ಸ್ಮಶಾನದಲ್ಲಿ ನೆರವೇರಿಸಲಾಗಿದೆ. ಇದಕ್ಕೆ ಯಾರಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ. ಸೌಹಾರ್ದದಿಂದ ಬದುಕುತ್ತಿರುವ ಇಲ್ಲಿನ ಜನರಿಗಾಗಿಯೇ ಈ ಚರ್ಚ್ ಇದೆ’ ಎಂದು ಫಾದರ್ ಮ್ಯಾಥ್ಯೂ ಚೂರಾವಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.