ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು)ಮೇಲೆ ಈಚೆಗೆ ನಡೆದ ದಾಳಿಯ ಹೊಣೆಯನ್ನು ‘ಹಿಂದೂ ರಕ್ಷಾ ದಳ್’ ಹೆಸರಿನ ಸಂಘಟನೆ ಹೊತ್ತುಕೊಂಡಿದೆ.
ಸಂಘಟನೆಯ ನಾಯಕ ಎಂದು ಪರಿಚಯಿಸಿಕೊಂಡಿರುವ ಪಿಂಕಿ ಚೌಧರಿ ಮಂಗಳವಾರ ಟ್ವಿಟರ್ನಲ್ಲಿ ವಿಡಿಯೊ ಪೋಸ್ಟ್ ಮಾಡಿ, ‘ಹಲ್ಲೆ ಮಾಡಿದವರು ನಮ್ಮವರು’ ಎಂದು ಗುಡುಗಿದ್ದಾರೆ.
‘ದೇಶ ವಿರೋಧಿ ಚಟುವಟಿಕೆಗಳಿಗೆ ಜೆಎನ್ಯು ಪಾಲನಾಕೇಂದ್ರವಾಗಿತ್ತು. ಇಂಥ ಬೆಳವಣಿಗೆಯನ್ನು ಸಹಿಸಲು ನಮಗೆ ಆಗುವುದಿಲ್ಲ. ಜೆಎನ್ಯು ಮೇಲೆ ನಡೆದ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ದಾಳಿ ನಡೆಸಿದವರು ನಮ್ಮ ಕಾರ್ಯಕರ್ತರು’ ಎಂದು ಚೌಧರಿ ವಿಡಿಯೊದಲ್ಲಿ ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೌಧರಿ ಹೇಳಿರುವ ಮಾತುಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲಾಗುವುದು. ‘ದೆಹಲಿ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಜೆಎನ್ಯು ಪರಿಸರದಲ್ಲಿ ಹಲ್ಲೆ ನಡೆಸಿದವರ ಮುಖ ಗುರುತಿಸಲು ಯತ್ನಿಸಲಾಗುತ್ತಿದೆ’ ಎಂಬ ಸರ್ಕಾರಿ ಅಧಿಕಾರಿಗಳ ಹೇಳಿಕೆಯನ್ನುಎಎನ್ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಭಾನುವಾರ ಸಂಜೆ ಜೆಎನ್ಯು ಬೋಧಕರ ಒಕ್ಕೂಟ ಕರೆದಿದ್ದ ಸಭೆಯ ಮೇಲೆ ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಕಮ್ಯುನಿಸ್ಟ್ ವಿಚಾರ ಧಾರೆಯ ಜೆಎನ್ಯುಎಸ್ಯು ಮತ್ತು ಆರ್ಎಸ್ಎಸ್ ಸಂಯೋಜಿತ ಎಬಿವಿಪಿ ಪರಸ್ಪರ ದೋಷಾರೋಪ ಮಾಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.