ನವದೆಹಲಿ: ಪ್ರಾಮಾಣಿಕ ತೆರಿಗೆದಾರರು ಮತ್ತು ನಿಯಮಿತವಾಗಿ ತೆರಿಗೆ ಪಾವತಿಸುವವರಿಗೆ ತೆರಿಗೆ ಸಂಬಂಧಿತ ಕೆಲಸಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯುವಾಗ ಆದ್ಯತೆ ನೀಡಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.
ಸಕಾಲದಲ್ಲಿ ಮತ್ತು ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸುವವರಿಗೆ ಕೆಲ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಪ್ರಸ್ತಾವ ಪರಿಶೀಲಿಸಲು ನೇರ ತೆರಿಗೆಯ ಕೇಂದ್ರೀಯ ಮಂಡಳಿಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಶೀಘ್ರದಲ್ಲಿಯೇ ತನ್ನ ವರದಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಹೆದ್ದಾರಿಗಳಲ್ಲಿನ ಟೋಲ್ಗೇಟ್ಗಳಲ್ಲಿ ಈ ತೆರಿಗೆದಾರರಿಗೆ ಆದ್ಯತೆ ನೀಡುವುದು ಮಂಡಳಿಯ ಉದ್ದೇಶವಾಗಿದೆ. ನಿರಂತರವಾಗಿ ತೆರಿಗೆ ಪಾವತಿಸುವವರನ್ನು ಸಾರ್ವಜನಿಕವಾಗಿ ಸನ್ಮಾನಿಸಲೂ ಉದ್ದೇಶಿಸಲಾಗಿದೆ. ಹಣಕಾಸು ಸಚಿವಾಲಯದ ಈ ಪ್ರಸ್ತಾವವನ್ನು ಅಂತಿಮ ಸಮ್ಮತಿಗಾಗಿ ಪ್ರಧಾನಿ ಕಚೇರಿಗೆ (ಪಿಎಂಒ) ಕಳಿಸಲಾಗಿದೆ.
ಆದಾಯ ತೆರಿಗೆ ಪಾವತಿಸುವವರು ಮತ್ತು ಅವರು ಸಲ್ಲಿಸುವ ಐ.ಟಿ ರಿಟರ್ನ್ಗಳ ದತ್ತಾಂಶ ಸಂಗ್ರಹಿಸುವ ಬೆಂಗಳೂರಿನಲ್ಲಿ ಇರುವ ಕೇಂದ್ರೀಯ ಪರಿಶೀಲನಾ ಕೇಂದ್ರದ (ಸಿಪಿಸಿ) ಸಾಮರ್ಥ್ಯ ಹೆಚ್ಚಿಸಲೂ ಉದ್ದೇಶಿಸಲಾಗಿದೆ.
ವರಮಾನದ ಒಂದೇ ಮೂಲ ಹೊಂದಿರುವ ತೆರಿಗೆದಾರರ ಐ.ಟಿ ರಿಟರ್ನ್ಸ್ಗಳನ್ನು ಕೆಲವೇ ಗಂಟೆಗಳಲ್ಲಿ ಪರಿಶೀಲಿಸಿ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ರಿಟರ್ನ್ಗಳನ್ನು ದೇಶದ ಯಾವುದೇ ಭಾಗದಲ್ಲಿಯೂ ತೆರಿಗೆ ಅಧಿಕಾರಿಗಳು ಪರಿಶೀಲಿಸುವ ಸೌಲಭ್ಯಕ್ಕೆ ಈ ವರ್ಷಾಂತ್ಯಕ್ಕೆ ಚಾಲನೆ ನೀಡಲಾಗುವುದು. ತೆರಿಗೆ ಸಂಬಂಧಿತ ಸೇವೆಗಳಲ್ಲಿ ತೆರಿಗೆದಾರರಿಗೆ ಕಿರುಕುಳ ನೀಡುವುದಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೂ ಕ್ರಮ ಕೈಗೊಳ್ಳಲಾಗುತ್ತಿದೆ.
ಅಂಕಿ – ಅಂಶಗಳು
8 ಕೋಟಿ: ಸದ್ಯಕ್ಕೆ ದೇಶದಲ್ಲಿ ಇರುವ ಆದಾಯ ತೆರಿಗೆ ಪಾವತಿದಾರರು
1.25 ಕೋಟಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ತೆರಿಗೆದಾರರ ಸೇರ್ಪಡೆಗೆ ಗುರಿ ನಿಗದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.