ADVERTISEMENT

2014ರ ಗೆಲುವು ಕುಟುಂಬ ರಾಜಕಾರಣದ ವಿರುದ್ಧ ಪ್ರಾಮಾಣಿಕತೆಯ ಗೆಲುವಾಗಿತ್ತು: ಮೋದಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 7:54 IST
Last Updated 20 ಮಾರ್ಚ್ 2019, 7:54 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: 2014ರ ಲೋಕಸಭಾ ಚುನಾವಣೆಯ ಗೆಲುವು ಕುಟುಂಬ ರಾಜಕಾರಣದ ವಿರುದ್ಧಪ್ರಾಮಾಣಿಕತೆಯ ಗೆಲುವಾಗಿತ್ತು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಬುಧವಾರ ತಮ್ಮ ಬ್ಲಾಗ್ ಬರಹದಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದ ಮೋದಿ, ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವವನ್ನು ನಂಬುವುದಿಲ್ಲ.ಕಾಂಗ್ರೆಸ್‍ನಲ್ಲಿ ಒಬ್ಬ ನಾಯಕ ಕಾಂಗ್ರೆಸ್ ಮುಖ್ಯಸ್ಥನಾಗಲು ಬಯಸಿದರೆ ಅವನನ್ನು ಹೊರದಬ್ಬಲಾಗುತ್ತದೆ. ರಕ್ಷಣಾ ಇಲಾಖೆಯನ್ನು ಕಾಂಗ್ರೆಸ್ ಆದಾಯದ ಮೂಲ ಎಂದು ಪರಿಗಣಿಸಿತ್ತು ಎಂದುಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಬಗ್ಗೆ ನಂಬಿಕೆ ಇಟ್ಟುಕೊಂಡಿಲ್ಲ.ಪಕ್ಷದ ಮುಖ್ಯಸ್ಥನಾಗಲು ಯಾರಾದರೂ ಬಯಸಿದರೆ ಅವರನ್ನು ಪಕ್ಷದಿಂದ ಹೊರದಬ್ಬಲಾಗುತ್ತದೆ.ಅವರಿಗೆ ರಕ್ಷಣಾ ಇಲಾಖೆ ಆದಾಯದ ಮೂಲ ಆಗಿತ್ತು. ಹಾಗಾಗಿಯೇ ಅವರಿಗೆ ಸಶಸ್ತ್ರ ಪಡೆಗಳಿಂದ ಗೌರವ ಸಿಗುತ್ತಿರಲಿಲ್ಲ ಎಂದಿದ್ದಾರೆ.

ADVERTISEMENT

1947ರ ನಂತರ ಅಧಿಕಾರಕ್ಕೆ ಬಂದ ಪ್ರತೀ ಕಾಂಗ್ರೆಸ್ ಸರ್ಕಾರವೂ ರಕ್ಷಣಾ ಇಲಾಖೆಯಲ್ಲಿ ಒಂದಕ್ಕಿಂತ ಹೆಚ್ಚು ಹಗರಣಗಳನ್ನು ನಡೆಸಿದೆ.ಜೀಪ್‍ನಿಂದ ಆರಂಭವಾದ ಹಗರಣ ಗನ್‍, ಸಬ್‍ಮರೀನ್, ಹೆಲಿಕಾಪ್ಟರ್‌ವರೆಗೆ ಬಂತು. ಇಲ್ಲಿನ ಮಧ್ಯವರ್ತಿಗಳು ಒಂದು ಕುಟುಂಬದೊಂದಿಗೆ ಸಂಬಂಧ ಹೊಂದಿದವರೇ ಆಗಿದ್ದರು.

ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣದ ತನಿಖೆ ವೇಳೆ ಮಧ್ಯವರ್ತಿ ಎಂದು ಆರೋಪ ಹೊತ್ತಿರುವ ಕ್ರಿಸ್ಟಿಯವ್ ಮೈಕಲ್, ಶ್ರೀಮತಿಗಾಂಧಿ ಮತ್ತು ಇಟಲಿಯ ಮಹಿಳೆಯ ಪುತ್ರನ ಹೆಸರನ್ನು ಹೇಳಿದ್ದರು ಎಂದು ಜಾರಿ ನಿರ್ದೇಶನಾಲಯ ಕಳೆದ ವರ್ಷ ನ್ಯಾಯಾಲಯದಲ್ಲಿ ಹೇಳಿತ್ತು.

ಈ ಕಾನೂನು ಕ್ರಮಗಳ ಬಗ್ಗೆ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ನೋಡಬಹುದು.ಪ್ರಸ್ತುತ ಅವರ ಉನ್ನತ ನಾಯಕತ್ವವು ದೊಡ್ಡ ಹಗರಣವೊಂದನ್ನು ಮುಖಾಮುಖಿಯಾಗಿ ಜಾಮೀನು ಪಡೆದುಕೊಂಡಿದ್ದಾರೆ.ಅವರ ವ್ಯವಹಾರಗಳ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದರೂ ಅದಕ್ಕೆ ಉತ್ತರಿಸುವ ಸೌಜನ್ಯವನ್ನು ಅವರು ತೋರಿಸಿಲ್ಲ ಎಂದು ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಉಲ್ಲೇಖಿಸಿ ಮೋದಿ ಹೇಳಿದ್ದಾರೆ.

ಶ್ರೀಮತಿ ಇಂದಿರಾ ಗಾಂಧಿಯವರು ನ್ಯಾಯಾಂಗ ಬದ್ಧತೆಬಗ್ಗೆ ಹೇಳಿದ್ದರು.ಅಂದರೆ ನ್ಯಾಯಾಲಯಗಳು ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಕ್ಕಿಂತ ಹೆಚ್ಚು ಅವರ ಕುಟುಂಬಕ್ಕೆ ನಿಷ್ಠೆಯಿಂದ ಇರಬೇಕು ಎಂದು ಅವರು ಬಯಸಿದ್ದರು.

ಬಿಜೆಪಿ ಸರ್ಕಾರವು ಸರ್ಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.ಪ್ರಧಾನಿ ಕಚೇರಿಗೆ ಸಮಾನಾಂತರ ಎಂಬಂತೆ ರಾಷ್ಟ್ರೀಯ ಸಲಹಾ ಸಮಿತಿಯನ್ನು ರಚಿಸಲಾಗಿದೆ.ಹೀಗಿರುವಾಗ ಕಾಂಗ್ರೆಸ್ ಸರ್ಕಾರಿ ಸಂಸ್ಥೆಗಳ ಬಗ್ಗೆ ಹೇಳುತ್ತಿದೆಯೇ?
ಕೇಂದ್ರ ಸಚಿವ ಸಂಪುಟ ಕೈಗೊಂಡ ಮಸೂದೆಪ್ರತಿಯನ್ನು ಯಾವುದೇ ಸಚಿವಾಲಯದ ಸದಸ್ಯನೂ ಆಗಿರದ ವ್ಯಕ್ತಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಹರಿದು ಹಾಕಿದ್ದರು.

2013ರಲ್ಲಿ ಎರಡು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಲು ಅನರ್ಹತೆ ಹೊಂದುತ್ತಾರೆ ಎನ್ನುವ ವಿವಾದಾತ್ಮಕ ಸುಗ್ರಿವಾಜ್ಞೆ ಮಸೂದೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹರಿದು ಹಾಕಿದ್ದರು.

ಕುಟುಂಬ ರಾಜಕಾರಣದಿಂದ ತತ್ತರಿಸಿ ಹೋಗಿದ್ದು ಸರ್ಕಾರಿ ಸಂಸ್ಥೆಗಳು ಎಂದು ಮೋದಿ ಟ್ವೀಟಿಸಿದ್ದಾರೆ.

ಮೋದಿಯ ಟೀಕಾ ಪ್ರಹಾರಕ್ಕೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಮಾಧ್ಯಮಗಳನ್ನು ಸೇರಿಸಿ ಎಲ್ಲ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಲೇ ಬಂದಿದೆ.ಜನರು ಮೂರ್ಖರು ಅಲ್ಲ, ಅವರಿಗೆಲ್ಲ ಅರ್ಥವಾಗುತ್ತದೆ ಎಂಬ ಸಂಗತಿ ಮೋದಿ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.