ಶ್ರೀನಗರ: ಡಿಡಿಸಿಯ ಚುನಾಯಿತ ಸದಸ್ಯರ ಖರೀದಿ ಯತ್ನ ನಡೆಯುತ್ತಿದೆ ಎಂಬ ಆರೋಪಗಳ ಹಿಂದೆಯೇ, ಪಕ್ಷಾಂತರ ತಡೆಗೆ ಡಿಡಿಸಿ ಸದಸ್ಯರಿಗೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದೇ ಎಂದುಜಮ್ಮು ಕಾಶ್ಮಿರ ಆಡಳಿತ ಪರಿಶೀಲಿಸುತ್ತಿದೆ.
ಡಿಡಿಸಿ ಸದಸ್ಯರಿಗೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದೇ ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ಪಿ.ಕೆ. ಪೋಲ್ ತಿಳಿಸಿದರು.
ಶ್ರೀನಗರದಲ್ಲಿ ನಡೆದ ಡಿಡಿಸಿ ಚುನಾಯಿತ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ಸಂಸತ್ತು, ವಿಧಾನಸಭೆ ಮತ್ತು ಪಂಚಾಯತ್ ಮಟ್ಟದಲ್ಲಿ ಅನ್ವಯವಾಗುವಂತೆ ಸದ್ಯ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಅವರು, ಡಿಡಿಸಿ ಚುನಾಯಿತ ಸದಸ್ಯರ ಪಕ್ಷ ಬದಲಾಯಿಸುವಂತೆ ಪ್ರಭಾವ ಬೀರಲು ಬಿಜೆಪಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಶಾಂತಿಯುತವಾಗಿ ಡಿಡಿಸಿ ಚುನಾವಣೆ ನಡೆದುದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಶ್ಲಾಘಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.