ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ರಾಯಪುರ: ‘ಪ್ರತಿ ದಿನ ಕೇವಲ ₹66 ದಿನಗೂಲಿ ಪಡೆದು ನಾವು ಬದುಕು ಸಾಗಿಸುವುದು ಹೇಗೆ?’ ಛತ್ತೀಸಗಢ ರಾಜಧಾನಿ ರಾಯಪುರದಲ್ಲಿ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಅಡುಗೆದಾರರು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದು ಹೀಗೆ.
ದಿನಗೂಲಿಯನ್ನು ₹66 ಗಳಿಂದ ₹400ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿರುವ ಅವರು, ತಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದ್ದಾರೆ.
‘ಇತರರ ಮಕ್ಕಳಿಗೆ ಅನ್ನ ಬೇಯಿಸಿ ನೀಡುವ ನಾವು, ನಮ್ಮ ಮಕ್ಕಳಿಗೆ ಊಟ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಪ್ರತಿಭಟನಕಾರರ ಪೈಕಿ ಶೇ 95ರಷ್ಟು ಮಹಿಳೆಯರೇ ಇದ್ದಾರೆ. ಇವರಲ್ಲಿ ಹಲವರು ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶಗಳ ನಿವಾಸಿಗಳಾಗಿದ್ದಾರೆ.
‘ಸರ್ಕಾರಗಳು ಬದಲಾಗುತ್ತಿವೆ. ಆದರೆ, ನಮ್ಮ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ದಿನವೂ ಬರೀ ₹66 ದಿನಗೂಲಿಯಲ್ಲಿ ನಾವು ಹೇಗೆ ಜೀವಿಸಬೇಕು ? ಸರ್ಕಾರ ಏಕೆ ನಮ್ಮ ಬದುಕಿನ ಜತೆ ಆಟವಾಡುತ್ತಿದೆ’ ಎಂದು ಸವಿತಾ ಮಾಣಿಕಪುರಿ (38) ಎನ್ನುವವರು ಪ್ರಶ್ನಿಸಿದ್ದಾರೆ.
ಮೇಘರಾಜ್ ಬಘೇಲ್ (45) ಎಂಬವರು ಮಾತನಾಡಿ, ‘ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ 87 ಸಾವಿರ ಬಿಸಿಯೂಟ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. 1995ರಲ್ಲಿ ಯೋಜನೆ ಪ್ರಾರಂಭವಾದಾಗ ಪ್ರತಿದಿನ ಕೇವಲ ₹15 ದಿನಗೂಲಿ ಪಡೆದು ಕೆಲಸ ಮಾಡುತ್ತಿದ್ದೆವು. ಈಗ 30 ವರ್ಷದ ಬಳಿಕವೂ ನಮ್ಮ ದಿನಗೂಲಿ ₹66 ಆಗಿದೆ. ರಾಜ್ಯ ಸರ್ಕಾರವು ಬಿಸಿಯೂಟ ಕಾರ್ಮಿಕರಿಗಾಗಿ ಏನೂ ಕೆಲಸ ಮಾಡಿಲ್ಲ. ನಮ್ಮ ದಿನಗೂಲಿ ₹440ಕ್ಕೆ ಹೆಚ್ಚಿಸಲಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.