ADVERTISEMENT

ಒತ್ತಡ ಹಾಗೂ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಟೆಕ್ಕಿ ಆತ್ಮಹತ್ಯೆ

ಐಎಎನ್ಎಸ್
Published 31 ಮಾರ್ಚ್ 2023, 9:33 IST
Last Updated 31 ಮಾರ್ಚ್ 2023, 9:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೈದರಾಬಾದ್: ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಉದ್ಯೋಗ ಕಳೆದುಕೊಳ್ಳುವ ಭಯದಿಂದ ಮತ್ತು ಕೆಲಸದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನೋದ್ ಕುಮಾರ್(32) ಅವರು ಅಲ್ಕಾಪುರ ನಗರದಲ್ಲಿರುವ ಸಹೋದರನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನೋದ್ ಅವರು ಮೂಲತಃ ಗುಂಟೂರಿನವರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯು ಹೊಸದಾಗಿ ಪರಿಚಯಿಸಿದ್ದ ’ಸಾಫ್ಟ್‌ವೇರ್ ಟೂಲ್‌’ ಬಳಕೆ ಕಷ್ಟವೆನಿಸಿ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ತುತ್ತಾಗಿದ್ದರು. ಈ ಬಗ್ಗೆ ತನ್ನ ಸಹೋದರನ ಬಳಿಯೂ ಅವರು ಹೇಳಿಕೊಂಡಿದ್ದರು.

ADVERTISEMENT

ಇತ್ತೀಚೆಗೆ ವಿನೋದ್‌ ಊರಿನಲ್ಲೇ ’ವರ್ಕ್ ಫ್ರಂ ಹೋಮ್‌’ನಲ್ಲಿದ್ದರು. ಆದರೆ ಕಂಪನಿಯು ಅವರನ್ನು ಹೈದರಾಬಾದ್‌ಗೆ ಬರಬೇಕೆಂದು ಸೂಚಿಸಿತ್ತು. ಸಹೋದರನ ಮನೆಯಲ್ಲಿ ಅವರು ಉಳಿದುಕೊಂಡು ಆಫೀಸಿಗೆ ಹೋಗುತ್ತಿದ್ದರು.

ಗುರುವಾರದಂದು ಸಹೋದರ ಹಾಗೂ ಆತನ ಕುಟುಂಬ ಮನೆಯಿಂದ ಹೊರಗೆ ಹೋದ ವೇಳೆ ಒಂಟಿಯಾಗಿದ್ದ ವಿನೋದ್‌ ಆತ್ಮಹತ್ಯೆ ನಿರ್ಧಾರ ಕೈಗೊಂಡರು. ಬೆಡ್ ಶೀಟನ್ನು ಫ್ಯಾನ್‌ಗೆ ಬಿಗಿದು ನೇಣುಹಾಕಿಕೊಂಡರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಈ ಕುರಿತು ನರಸಿಂಗಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.