ADVERTISEMENT

ಪಶ್ಚಿಮ ಬಂಗಾಳದ ಜನತೆಯ ಹಕ್ಕಿಗಾಗಿ ನನ್ನ ಹೋರಾಟ: ಪ್ರಿಯಾಂಕಾ ಟಿಬ್ರೆವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2021, 6:03 IST
Last Updated 12 ಸೆಪ್ಟೆಂಬರ್ 2021, 6:03 IST
ಪ್ರಿಯಾಂಕಾ ಟಿಬ್ರೆವಾಲ್, ಚಿತ್ರಕೃಪೆ: Twitter/@impriyankabjp
ಪ್ರಿಯಾಂಕಾ ಟಿಬ್ರೆವಾಲ್, ಚಿತ್ರಕೃಪೆ: Twitter/@impriyankabjp    

ಕೋಲ್ಕತ್ತ: ಪಶ್ಚಿಮ ಬಂಗಾಳದ ಜನತೆಯ ಹಕ್ಕಿಗಾಗಿ ನನ್ನ ಹೋರಾಟ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಜನರಿಗೂ ಬದುಕುವ ಹಕ್ಕಿದೆ. ಈ ಹಕ್ಕನ್ನು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಸೋಮವಾರದಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

'ನನ್ನ ಎದುರು ಸ್ಪರ್ಧಿಸುತ್ತಿರುವ ಅಭ್ಯರ್ಥಿ (ಮಮತಾ ಬ್ಯಾನರ್ಜಿ) ಈಗಾಗಲೇ ಚುನಾವಣೆಯಲ್ಲಿ ಸೋತಿದ್ದಾರೆ. ಅದಕ್ಕಾಗಿಯೇ ಭವಾನಿಪುರ ಉಪಚುನಾವಣೆ ನಡೆಯುತ್ತಿದೆ. ಅವರು (ಟಿಎಂಸಿ) ಈಗಾಗಲೇ ಭವಾನಿಪುರದಲ್ಲಿ ಗೆದ್ದಿದ್ದಾರೆ. ಆದರೆ ಪ್ರಜಾಪ್ರಭುತ್ವ ಅಥವಾ ಜನಾದೇಶಕ್ಕೆ ಟಿಎಂಸಿ ಪಕ್ಷವು ಕಿಂಚಿತ್ತು ಗೌರವವನ್ನು ಕೊಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.

'ಇಲ್ಲೇ ಹುಟ್ಟಿ ಬೆಳೆದ ನಾನು ಭವಾನಿಪುರದ ಮಗಳು. ಭವಾನಿಪುರಕ್ಕೆ ಸ್ವಂತ ಮಗಳು ಬೇಕಾಗಿದೆ' ಎಂದು ಹೇಳಿದ್ದಾರೆ.

ಭವಾನಿಪುರ ಉಪಚುನಾವಣೆಯು ಸೆಪ್ಟೆಂಬರ್ 30ರಂದು ನಡೆಯಲಿದ್ದು, ಅಕ್ಟೋಬರ್ 3ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.