ಗಾಜಿಯಾಪುರ್: ಉತ್ತರ ಪ್ರದೇಶದಲ್ಲಿ ವಿಪಕ್ಷಗಳು ನನ್ನ ಜಾತಿ ಕೇಳುತ್ತವೆ. ನಾನು ಈ ದೇಶದಲ್ಲಿರುವ ಎಲ್ಲ ಬಡಜನರ ಜಾತಿಗೆ ಸೇರಿದವನು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಮೇ 11ರಂದು ಸೋನೆಭದ್ರಾ ಮತ್ತು ಗಾಜಿಯಾಪುರದಲ್ಲಿಚುನಾವಣಾ ಪ್ರಚಾರ ಮಾಡಿದ ಮೋದಿ 1984 ಸಿಖ್ ನರಮೇಧದ ಬಗ್ಗೆ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಹಿಂದಿನ ಸರ್ಕಾರಗಳು ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸಿದ್ದವು.21 ವರ್ಷಗಳ ಹಿಂದೆ ಇದೇ ದಿನ ಪೊಖ್ರಾನ್ ಅಣುಬಾಂಬ್ ಪರೀಕ್ಷೆ ನಡೆದಿತ್ತು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
ಎಸ್ಪಿ, ಬಿಎಸ್ಪಿಉತ್ತರ ಪ್ರದೇಶವನ್ನು ನಾಶ ಮಾಡಿದ್ದರು. ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಆ ನಾಶದಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಹೆಣಗಾಡುತ್ತಿವೆ.ಇದೊಂದು ಮಹಾಮಿಲಾವಟ್ (ಅಪವಿತ್ರ ಮೈತ್ರಿ) ಎಂದಿದ್ದಾರೆ ಮೋದಿ.
ಬಿಎಸ್ಪಿ ನಾಯಕಿ ಮಾಯಾವತಿ ಮೋದಿಯನ್ನು ಫೇಕ್ ಒಬಿಸಿ ನಾಯಕ ಎಂದಿದ್ದರು. ಇದನ್ನು ಉಲ್ಲೇಖಿಸಿದ ಮೋದಿ ಅವರೀಗ ನನ್ನ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಅವರಲ್ಲಿ ಹೇಳುವುದೇನೆಂದರೆ ನಾನು ಒಂದು ಜಾತಿಗೆ ಮಾತ್ರ ಸೇರಿದವನಲ್ಲ, ಬಡವರು ಯಾವ ಜಾತಿಗೆ ಸೇರಿದ್ದಾರೋ ಅವರ ಜಾತಿಯೇ ನಾನು ಎಂದಿದ್ದಾರೆ. ಈ ವೇಳೆ ಬಡವರಿಗಾಗಿ ತಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪಟ್ಟಿಯನ್ನು ಮೋದಿ ಹೇಳಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸಿತ್ತು. ಆದರೆ ವಾಜಪೇಯಿ ಸರ್ಕಾರ ಎಲ್ಲವನ್ನೂ ಸರಿ ಮಾಡಿತು.ನಮ್ಮ ಭದ್ರತೆ ಮತ್ತು ತನಿಖಾ ಸಂಸ್ಥೆಗಳ ಜತೆ ಸಂಪರ್ಕ ಹೊಂದಿರುವವರು ಈ ಬಗ್ಗೆಬರೆದಿದ್ದಾರೆ.ಆ ಸರ್ಕಾರಗಳು ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದರಿಂದ ಉಂಟಾಗುವ ಪರಿಣಾಮಗಳ ಬಗ್ಗೆಯೂ ಹೇಳಿದ್ದರು. ತೃತೀಯ ರಂಗ ಉಂಟುಮಾಡಿದ ತಪ್ಪುಗಳು ಸಾಮಾನ್ಯವೇನಲ್ಲ.
ದೇಶದಲ್ಲಿ ಮಹಾಮಿಲಾವಟ್ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ದೇಶದ ಭದ್ರತೆಗೆ ಆಪತ್ತು ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.