ನಾಮಕ್ಕಲ್ (ತಮಿಳುನಾಡು): ‘ನಾನು ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಂಬಲಿಸುವುದಿಲ್ಲ. ರಾಜ್ಯದ ಜನರು ನನಗೆ ವಹಿಸಿರುವ ಜವಾಬ್ಧಾರಿಯನ್ನು ನಿಭಾಯಿಸುವ ಕೆಲಸ ಮಾಡಲು ಈ ಸ್ಥಾನದಲ್ಲಿರುವೆ ಎಂಬುದಾಗಿ ಭಾವಿಸುವೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮಂಗಳವಾರ ಹೇಳಿದರು.
ನಾಮಕ್ಕಲ್ ಜಿಲ್ಲೆಯ ರಾಶಿಪುರಂನಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಮುಖ್ಯಮಂತ್ರಿ ಎಂದು ಇಲ್ಲಿ ಪರಿಚಯಿಸಲಾಯಿತು. ಆದರೆ, ಇಲ್ಲಿ ನೆರೆದಿರುವ ಪ್ರತಿಯೊಬ್ಬರು ಸಹ ಮುಖ್ಯಮಂತ್ರಿ ಇದ್ದಂತೆ. ನೀವು ವಹಿಸಿರುವ ಕೆಲಸಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ನಾನು ಹುದ್ದೆಯಲ್ಲಿರುವೆ’ ಎಂದರು.
‘ನಾನು ಬಹಳ ಕಠಿಣ ಶ್ರಮದಿಂದ ರಾಜಕಾರಣದಲ್ಲಿ ಮೇಲೆ ಬಂದವನು. ಅದರಲ್ಲೂ ನಾನು ಈ ಸ್ಥಾನದಲ್ಲಿ ಇರಲು ಕಾರಣರಾದ ನಮ್ಮ ನಾಯಕರಾದ ದಿವಂಗತ ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದೂ ಹೇಳಿದರು.
ಪ್ರಚಾರಸಭೆಗೂ ಮುನ್ನ ಅವರು ನಾಮಕ್ಕಲ್ನಲ್ಲಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.