ಕೋಲ್ಕತ್ತಾ: ನಾವು ಕೋವಿಡ್ ಮತ್ತು ಅಂಪನ್ ಚಂಡಮಾರುತಗಳಿಂದ ಜೀವಗಳನ್ನು ಉಳಿಸಲು ಹೋರಾಡುತ್ತಿದ್ದರೆ ಕೆಲ ಪಕ್ಷಗಳು ರಾಜಕೀಯದಲ್ಲಿ ತೊಡಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ 19 ಮತ್ತು ಅಂಪನ್ ಚಂಡಮಾರುತದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಜನರನ್ನು ರಕ್ಷಿಸುವತ್ತ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲ ಪಕ್ಷಗಳು ನಮ್ಮನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಹೇಳುತ್ತಿವೆ. ನಾನು ಯಾವತ್ತು ಮೋದಿಯನ್ನು ಕೇಂದ್ರದಿಂದ ತೆಗೆದು ಹಾಕಿ ಎಂದು ಹೇಳಲಿಲ್ಲ,’ ಎಂದು ಅವರು ಹೇಳಿದ್ದಾರೆ.
‘ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಇದು ಸಮಯವೇ? ಮೂರು ತಿಂಗಳಿಂದ ಅವರೆಲ್ಲ ಎಲ್ಲಿದ್ದರು? ನಾವು ಬೀದಿಗಿಳಿದು ಕೆಲಸ ಮಾಡಿದ್ದೇವೆ. ಪಶ್ಚಿಮ ಬಂಗಾಳವು ಕೋವಿಡ್ ಮತ್ತು ಷಡ್ಯಂತ್ರಗಳ ವಿರುದ್ಧ ಗೆಲ್ಲಲಿದೆ,’ ಎಂದೂ ಮಮತಾ ಹೇಳಿದ್ದಾರೆ.
ಅಂಪನ್ ಚಂಡಮಾರುತದಿಂದ ಪಶ್ಚಿಮ ಬಂಗಾಳಕ್ಕೆ ಒಂದು ₹1 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಘೋಷಣೆಯನ್ನು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿತ್ತು. ಅಲ್ಲದೆ, ವಿಪತ್ತುಗಳ ಮೂಲಕ ರಾಜ್ಯ ಸರ್ಕಾರ ದುಡ್ಡು ಹೊಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಹೆಸರು ಹೇಳದೇ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.